ನಿಜವಾಗ್ಲೂ ಹೇಳ್ತಾ ಇದ್ದೀನಿ. ಅಮೆರಿಕದ ಘಟನೆ (ಆರ್ಥಿಕ ಹಿಂಜರಿತ) ನಂತರ ತಮಿಳುನಾಡಿನಲ್ಲಿ ಐಟಿ ವಲಯಕ್ಕೆ ಯಾವುದೇ ಭವಿಷ್ಯ ಇಲ್ಲದಂತಾಗಿದೆ. ಇಲ್ಲಿ ಹೂಡಿಕೆ ಮಾಡಿ ನಿಮ್ಮ ಹಣ ವೇಸ್ಟ್ ಮಾಡಬೇಡಿ : ವಿದೇಶದಲ್ಲಿರುವ ಭಾರತೀಯರಿಗೆ, ಎನ್ಆರ್ಐಗಳಿಗೆ ಹೀಗೆಂದು ಕರೆ ನೀಡಿದವರು ಬೇರಾರೂ ಅಲ್ಲ, ತಮಿಳುನಾಡಿನ ವಿದ್ಯುತ್ ಇಲಾಖಾ ಸಚಿವ ಆರ್ಕಾಟ್ ವೀರಸ್ವಾಮಿ.
ಶುಕ್ರವಾರ ಇಲ್ಲಿ ನಡೆಯುತ್ತಿರುವ ಪ್ರವಾಸೀ ಭಾರತೀಯ ದಿವಸ್ ಸಮಾವೇಶದಲ್ಲಿ, ವಿದೇಶೀ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕಾಗೋದ ಉದ್ಯಮಿಯೊಬ್ಬರು ತಮಿಳುನಾಡಿನಲ್ಲಿ ಐಟಿ ಕ್ಷೇತ್ರದ ಹೂಡಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ತಮಿಳುನಾಡಿನಲ್ಲಿ ಐಟಿ ಕ್ಷೇತ್ರ ತೀರಾ ಮಂಕಾಗಿದೆ. ಹೆಚ್ಚಿನವರಿಗೆ ವಿದೇಶದಿಂದ ಕೆಲಸ ದೊರೆಯುತ್ತಿಲ್ಲ. ಇದ್ದ ಕೆಲಸವೂ ಕೈತಪ್ಪಿ ಹೋಗುತ್ತಿದೆ. ಹಲವಾರು ಘಟಕಗಳು ತೀವ್ರ ಬಾಧೆಗೊಳಗಾಗಿವೆ. ಐಟಿ ಬಿಟ್ಟು ಬೇರಾವುದೇ ಕ್ಷೇತ್ರದಲ್ಲಿ ನೀವು ಹೂಡಿಕೆ ಮಾಡಬಹುದು ಎಂದು ವೀರಸ್ವಾಮಿ ಹೇಳಿದರು.
ಇಡೀ ಸಮಾವೇಶದ ಉದ್ದೇಶವೇ, ವಿದೇಶೀ ಬಂಡವಾಳ ಆಕರ್ಷಿಸುವುದಾಗಿತ್ತು ಎಂಬುದು ಇಲ್ಲಿ ವಿಪರ್ಯಾಸ. ಆದರೆ, ಆಗ ಎಚ್ಚೆತ್ತುಕೊಂಡ ಐಟಿ ಕಾರ್ಯದರ್ಶಿ, ಪಿ.ಡಬ್ಲ್ಯುಸಿ ದಾವಿಡರ್, ರಾಜ್ಯದಲ್ಲಿ 'ಪಿಂಕ್ ಸ್ಲಿಪ್ ಸಂಸ್ಕೃತಿ' ಇಲ್ಲ ಎಂದು ಸ್ಪಷ್ಟಪಡಿಸಿ, ತಮ್ಮ ಕ್ಷೇತ್ರವನ್ನು ಸಮರ್ಥಿಸಿಕೊಂಡರು.
ವಿದೇಶದ ಯೋಜನೆಗಳನ್ನು ಅವಲಂಬಿಸಿರುವ ಕೆಲವೊಂದು ಘಟಕಗಳು ಆರ್ಥಿಕ ಹಿಂಜರಿತದ ದುಷ್ಪರಿಣಾಮಕ್ಕೀಡಾಗಿವೆಯಾದರೂ, ಪರಿಸ್ಥಿತಿ ಆಂತಕಕಾರಿಯಾಗೇನೂ ಇಲ್ಲ. ನಮ್ಮಲ್ಲಿ ಈಗಲೂ ಅತ್ಯುತ್ತಮ ಐಟಿ ಮಾನವಸಂಪನ್ಮೂಲವಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಹೂಡಿಕೆ ಮಾಡುವವರನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಸಾವರಿಸಿಕೊಂಡು ನುಡಿದರು ದಾವಿಡರ್.
ಹೆಚ್ಚಿನ ಐಟಿ ಕಂಪನಿಗಳಿಗೆ ಅಬಾಧಿತವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಸರಕಾರ ಎದುರಿಸುತ್ತಿರುವ ತೊಂದರೆಯಿಂದಾಗಿ ವೀರಸ್ವಾಮಿ ಚಿಂತಿತರಾಗಿದ್ದರು. ರಾಜ್ಯದಲ್ಲಿ ಕಾಣಿಸಿಕೊಂಡಿರುವ ವಿದ್ಯುತ್ ಅಭಾವಕ್ಕೆ ಸರಕಾರವು ವಿದೇಶೀ ಕಂಪನಿಗಳಿಗೆ ಅಬಾಧಿತ ವಿದ್ಯುತ್ ಪೂರೈಕೆಗೆ ಮುಂದಾಗಿರುವುದೇ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. |