ಸತ್ಯಂ ಕಪಾಟಿನೊಳಗಿಂದ ಅಸ್ಥಿಪಂಜರಗಳೆಲ್ಲಾ ಹೊರಬರುತ್ತಿರುವುದು ಇನ್ನೂ ನಿಂತಿಲ್ಲ. ದೇಶದ ಮಾರುಕಟ್ಟೆಯನ್ನೇ ನಡುಗಿಸಿದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಸುಳಿವು ನೀಡಬಲ್ಲ ಬ್ಯಾಂಕು ಸ್ಟೇಟ್ಮೆಂಟ್ಗಳನ್ನು ಹಗರಣದ ರೂವಾರಿ ರಾಮಲಿಂಗ ರಾಜು ಮತ್ತು ಆತನ ಸಹಾಯಕರು ಬಚ್ಚಿಟ್ಟಿದ್ದಾರೆ ಎಂಬ ಅಂಶವೂ ಹೊರಬರತೊಡಗಿದೆ.
ಹೈದರಾಬಾದಿನಲ್ಲಿರುವ ಸತ್ಯಂನ ಮೂರು ಕಚೇರಿಗಳಿಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ದಾಳಿ ನಡೆಸಿದಾಗಲೂ ಎಲ್ಲಿ ಕೂಡ ಈ ಕುರಿತ ದಾಖಲೆಗಳು ಪತ್ತೆಯಾಗಿಲ್ಲ. ಆ ಬಳಿಕ ಈ ಕಚೇರಿಗಳಿಗೆ ಬೀಗ ಜಡಿಯಲಾಗಿದೆ.
ನೋಂದಾಯಿತ ಕಚೇರಿಗಳಲ್ಲಿ ಯಾವುದೇ ಕಂಪನಿಗಳು ಪ್ರಸಕ್ತ ವರ್ಷದ ಮತ್ತು ಹಿಂದಿನ ವರ್ಷಗಳ ಹಣಕಾಸು ಸ್ಟೇಟ್ಮೆಂಟ್ ನೀಡಬೇಕಾಗುತ್ತದೆ. ಇದೀಗ ಸತ್ಯಂನ ಬ್ಯಾಂಕ್ ಸ್ಟೇಟ್ಮೆಂಟ್ಗಳು ದಿಢೀರ್ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಗಳ ಪ್ರಾದೇಶಿಕ ಕಚೇರಿಯು ಗಂಭೀರ ಹಗರಣ ತನಿಖಾ ಸಂಸ್ಥೆ (ಎಸ್ಎಫ್ಐಒ)ಗೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ. |