ಲಾರಿ ಮುಷ್ಕರ ಏಳನೇ ದಿನಕ್ಕೆ ಕಾಲಿರಿಸಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಭಾರೀ ಹೊಡೆತ ಬೀಳತೊಡಗಿದೆ. ಸರಕಾರದೊಂದಿಗೆ ಮಾತುಕತೆಗೆ ನಿರಾಕರಿಸುತ್ತಿರುವ ಲಾರಿ ಮಾಲೀಕರ ಸಂಘಟನೆಯು ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಭಾನುವಾರವೂ ಟ್ರಕ್ ಮಾಲಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ಮೂಲಕ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಂತಾಗಿದೆ. ದೇಶದೆಲ್ಲೆಡೆ ಇದರ ಪ್ರತಿಫಲನ ಕಂಡು ಬಂದಿದ್ದು ತರಕಾರಿ, ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಅದರಲ್ಲೂ ಈರುಳ್ಳಿ, ಟೊಮ್ಯಾಟೋ, ಬಟಾಟೆಗಳ ದರ ದ್ವಿಗುಣವಾಗಿದೆ ಎಂದು ತಿಳಿದು ಬಂದಿದೆ.
ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ನ ಅಗ್ರ ನಾಯಕರು ಬಂಧನದಲ್ಲಿರುವ ಕಾರಣ ಸರಕಾರ ಕರೆದಿರುವ ಮಾತುಕತೆಯ ಪ್ರಸ್ತಾಪವನ್ನು ಸಂಘಟನೆ ತಿರಸ್ಕರಿಸಿದೆ. ಮೊದಲು ನಮ್ಮ ನಾಯಕರನ್ನು ಬಿಡುಗಡೆ ಮಾಡಿ. ನಂತರ ಮಾತುಕತೆಯ ವಿಚಾರ ಪ್ರಸ್ತಾಪಿಸಿ ಎಂದು ತಿರುಗೇಟು ನೀಡಿದ್ದು, ನಾಯಕರಿಲ್ಲದೆ ನಮ್ಮ ಮಾತುಕತೆ ಅಸಾಧ್ಯ ಎಂದು ಸ್ಪಷ್ಟಪಡಿಸಿದೆ. ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ನ ಆರು ಮಂದಿ ಸದಸ್ಯರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದರಿಂದ ಮುಷ್ಕರ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ.
ಡೀಸೆಲ್ ಬೆಲೆಯನ್ನು ಸರಾಸರಿ 10ರಷ್ಟು ಇಳಿಸಬೇಕು, ತೆರಿಗೆ ದರ ಕಡಿತ, ಟೈರುಗಳ ಬೆಲೆಯಲ್ಲಿ ಇಳಿಕೆ ಮುಂತಾದ ಹತ್ತು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ.
|