ಸತ್ಯಂ ಕಂಪೂಟರ್ಸ್ನ ಸ್ಥಾಪಕ ರಾಮಲಿಂಗ ರಾಜು ಮತ್ತು ಸಹೋದರ ರಾಮ ರಾಜು ಬಂಧನದ ಬಳಿಕ ನಿನ್ನೆ ತಡರಾತ್ರಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್ರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ವಂಚನೆ ಬಯಲಾಗುತ್ತಿದ್ದಂತೆ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸತ್ಯಂ ಸಿಎಫ್ಓ ಶ್ರೀನಿವಾಸ್ರನ್ನು ಆಂಧ್ರಪ್ರದೇಶ ಸಿಐಡಿಯ ಐಜಿ ಕರೆಸಿ ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಬಂಧಿಸಲಾಗಿದ್ದು, ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ನಕಲಿ ದಾಖಲೆಗಳ ಸೃಷ್ಟಿ, ವಂಚನೆ ಮತ್ತು ನಂಬಿಕೆ ದ್ರೋಹ ಕ್ರಿಮಿನಲ್ ಪ್ರಕರಣಗಳನ್ನು ಅವರ ಮೇಲೆ ಹಾಕಲಾಗಿದೆ.
ಶ್ರೀನಿವಾಸ್ ಬಂಧನವನ್ನು ಸಿಐಡಿ ಪೊಲೀಸ್ ಮಹಾ ನಿರ್ದೇಶಕ ವಿ.ಎಸ್.ಕೆ. ಕೌಮುದಿ ಒಪ್ಪಿಕೊಂಡಿದ್ದು, ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಮಲಿಂಗ ರಾಜು ಆಪ್ತರಾಗಿರುವ ಶ್ರೀನಿವಾಸ್ ಬಳಿ ವಂಚನೆ ಸಂಬಂಧ ಸಾಕಷ್ಟು ಮಾಹಿತಿಗಳು ಸಿಗಲಿವೆ ಮತ್ತು ಸ್ವತಃ ಅವರೇ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಸಿಐಡಿ ಪೊಲೀಸರ ಲೆಕ್ಕಾಚಾರ.
ನಿನ್ನೆ ಬಂಧಿಸಲಾಗಿದ್ದ ರಾಮಲಿಂಗ ರಾಜು ಮತ್ತು ಸಹೋದರ ರಾಮ ರಾಜುರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಾಗಾಗಿ ಜನವರಿ 23ರ ತನಕ ಅವರು ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ. ಇದೀಗ ಅವರನ್ನು ಸತ್ಯಂ ಹಣಕಾಸು ಅಧಿಕಾರಿ ಕೂಡ ಸೇರಿಕೊಂಡಂತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಮೂರು ಜನರನ್ನು ಇದುವರೆಗೆ ಬಂಧಿಸಿದಂತಾಗಿದೆ.
|