ಸತ್ಯಂ ಕಂಪ್ಯೂಟರ್ಸ್ಗೆ ಹೊಸದಾಗಿ ಮೂವರು ಸ್ವತಂತ್ರ ನಿರ್ದೇಶಕರನ್ನು ಕೇಂದ್ರ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಎಚ್ಡಿಎಫ್ಸಿ ಅಧ್ಯಕ್ಷ ದೀಪಕ್ ಪಾರೇಖ್, ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ್ ಕಾರ್ಣಿಕ್ ಮತ್ತು ಸೆಬಿಯ ಮಾಜಿ ಸದಸ್ಯ ಸಿ. ಅಚ್ಯುತ್ತನ್ರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಕಂಪನಿ ವ್ಯವಹಾರಗಳ ಕೇಂದ್ರ ಸಚಿವ ಪ್ರೇಮ್ಚಂದ್ ಗುಪ್ತಾ ತಿಳಿಸಿದ್ದಾರೆ.
ಕಂಪನಿಯ ನೌಕರರ ಸಂಬಳ ಮತ್ತಿತರ ಖರ್ಚಿಗಾಗಿ ಸರಕಾರ ಪರಿಹಾರ ಪ್ಯಾಕೇಜ್ ಬಗ್ಗೆ ಯೋಚಿಸುತ್ತಿದೆಯೇ ಮತ್ತು ಇನ್ನಷ್ಟು ಮಂದಿಯನ್ನು ಕಂಪನಿಯ ನಿರ್ದೇಶಕರ ಮಂಡಳಿಗೆ ನೇಮಕ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಸಚಿವ ಗುಪ್ತಾ, "ಇದೀಗ ನೇಮಕಗೊಂಡಿರುವ ಆಡಳಿತ ಮಂಡಳಿ ಹೊಸದಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಮುಂದಿನ 24 ಗಂಟೆಗಳಲ್ಲಿ ಮಂಡಳಿಯು ಸಭೆ ಸೇರಲಿದ್ದು, ಅಧ್ಯಕ್ಷರ ನೇಮಕ ನಿರ್ಧಾರವನ್ನು ಮಂಡಳಿಗೆ ವಹಿಸಲಾಗಿದೆ" ಎಂದು ಹೇಳಿದ್ದಾರೆ.
ವ್ಯವಹಾರವನ್ನು ಮುಂದುವರಿಸುವುದು, ಗ್ರಾಹಕರ ಹಿತರಕ್ಷಣೆ ಮತ್ತು ಕಂಪನಿಯನ್ನು ಮರಳಿ ಹಳಿಗೆ ತರುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ನಿರ್ದೇಶಕರ ಮಂಡಳಿಗೆ ನೇಮಕವಾಗಿರುವ ಕಿರಣ್ ಕಾರ್ಣಿಕ್ ಭರವಸೆ.
ಕಂಪನಿಯ ಸ್ಥಿರತೆಯನ್ನು ಮರಳಿಸುವುದು ಮಂಡಳಿಯ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಾಚರಿಸಲಿದೆ. ಗ್ರಾಹಕರಲ್ಲಿ ವಿಶ್ವಾಸ ತುಂಬುವುದು ಮತ್ತು ಉದ್ಯೋಗಿಗಳ ರಕ್ಷಣೆಯತ್ತ ಕೂಡ ಗಮನ ಹರಿಸುವುದು. ಇದರಲ್ಲಿ ಹೂಡಿಕೆದಾರರ ಹಿತರಕ್ಷಣೆಯೂ ಅಡಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.
|