ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಾರಿ ಮುಷ್ಕರ ಎಂಟನೆ ದಿನಕ್ಕೆ ಕಾಲಿರಿಸಿದ್ದು, ಪರಿಸ್ಥಿತಿಯ ಅವಲೋಕನಕ್ಕಾಗಿ ಕೇಂದ್ರವು ರಾಜ್ಯಗಳ ಸಾರಿಗೆ ಸಚಿವರುಗಳ ಸಭೆ ಕರೆದಿದೆ. ಮಹಾರಾಷ್ಟ್ರ ಹೊರತು ಪಡಿಸಿದಂತೆ ಮಿಕ್ಕೆಡೆಯಲ್ಲಿ ಲಾರಿ ಮುಷ್ಕರ ಮುಂದುವರಿದ್ದು, ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಹೊಡೆತ ಬಿದ್ದಿದೆ.
"ಮುಷ್ಕರ ಮುಂದುವರಿದಿದೆ ಮತ್ತು ಇದರ ಪರಿಹಾರ ಸಂಪೂರ್ಣವಾಗಿ ಸರ್ಕಾರದ ಕೈಯಲ್ಲಿದೆ" ಎಂದು ಅಖಿಲ ಭಾರತೀಯ ವಾಹನ ಸಾರಿಗೆ ಸಂಘಟನೆ(ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್)ಯ ಉಪಾಧ್ಯಕ್ಷ ಅಮ್ಲೋಕ್ ಸಿಂಗ್ ಭಾಟಿಯಾ ಸೋಮವಾರ ಹೇಳಿದ್ದಾರೆ.
ಸಭೆಯಲ್ಲಿ ಪ್ರಸಕ್ತ ಪರಿಸ್ಥಿತಿ ಹಾಗೂ ರಾಷ್ಟ್ರಾದ್ಯಂತ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಕೈಗೊಳ್ಳಬೇಕಾಗ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಕೇಂದ್ರ ಸಾರಿಗೆ ಕಾರ್ಯದರ್ಶಿ ಬ್ರಹ್ಮ ದತ್ತ ಹೇಳಿದ್ದಾರೆ. ಹಲವು ರಾಜ್ಯಗಳ ಟ್ರಕ್ ಮಾಲಿಕರು ಇದೀಗಾಗಲೇ ಮುಷ್ಕರ ಹಿಂತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ತಮ್ಮ ಬೇಡಿಕೆಗಳು ಈಡೇರುವ ತನಕ ಮುಷ್ಕರ ಹಿಂತೆಗೆಯುವುದಿಲ್ಲ ಎಂದು ಸಾರಿಗೆ ಸಂಘಟನೆ ಹೇಳಿದೆ. ಲಾರಿ ಮಾಲಿಕರ ಮುಷ್ಕರದಿಂದಾಗಿ ಜನಸಾಮಾನ್ಯರ ಬದುಕಿನ ಮೇಲೆ ಭಾರೀ ಹೊಡೆತ ಬೀಳತೊಡಗಿದೆ. ಸರಕಾರದೊಂದಿಗೆ ಮಾತುಕತೆಗೆ ನಿರಾಕರಿಸುತ್ತಿರುವ ಲಾರಿ ಮಾಲಿಕರ ಸಂಘಟನೆಯು ಬಂಧಿತರ ಬಿಡುಗಡೆಗೆ ಒತ್ತಾಯಿಸಿದೆ.
ದೇಶದೆಲ್ಲೆಡೆ ಮುಷ್ಕರದ ಪರಿಣಾಮ ಕಂಡು ಬಂದಿದ್ದು ತರಕಾರಿ, ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಅದರಲ್ಲೂ ಈರುಳ್ಳಿ, ಟೊಮ್ಯಾಟೋ, ಬಟಾಟೆಗಳ ದರ ದ್ವಿಗುಣವಾಗಿದೆ ಎಂದು ತಿಳಿದು ಬಂದಿದೆ.
ಡೀಸೆಲ್ ಬೆಲೆಯನ್ನು ಸರಾಸರಿ 10ರಷ್ಟು ಇಳಿಸಬೇಕು, ತೆರಿಗೆ ದರ ಕಡಿತ, ಟೈರುಗಳ ಬೆಲೆಯಲ್ಲಿ ಇಳಿಕೆ ಮುಂತಾದ ಹತ್ತು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. |