ಸತ್ಯಂ ಕಂಪ್ಯೂಟರ್ಸ್ನ ವಿಲೀನ ಆಯ್ಕೆಗಳು ಮುಕ್ತವಾಗಿವೆ ಎಂದು ಹೊಸ ಮಂಡಳಿ ಸೋಮವಾರ ತಿಳಿಸಿದೆ. ಹೊಸದಾಗಿ ಸರಕಾರದಿಂದ ರಚಿಸಲ್ಪಟ್ಟ ಸತ್ಯಂ ಮಂಡಳಿಯ ಪ್ರಥಮ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹಿರಿಯ ಬ್ಯಾಂಕರ್ ಮತ್ತು ಮಂಡಳಿ ಸದಸ್ಯ ದೀಪಕ್ ಪಾರೇಖ್ ಈ ವಿಷಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರೇಖ್, ಸತ್ಯಂನ ತೃತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಸ್ವತಂತ್ರ ಲೆಕ್ಕಪತ್ರ ಸಂಸ್ಥೆಗೆ ವಹಿಸಿಕೊಡಲಾಗುತ್ತದೆ ಎಂದರಲ್ಲದೆ, ಸತ್ಯಂ ಮಂಡಳಿಗೆ ಇನ್ನಷ್ಟು ಸದಸ್ಯರನ್ನು ಸರಕಾರವು ಶೀಘ್ರದಲ್ಲೇ ನೇಮಿಸಲಿದೆ ಎಂದು ತಿಳಿಸಿದರು.
ಭಾರೀ ಪ್ರಮಾಣದ ಹಗರಣ ಬೆಳಕಿಗೆ ಬಂದ ಬಳಿಕ ಸತ್ಯಂನ ಹೊರಗುತ್ತಿಗೆ ಕಾರ್ಯವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಆರ್ಥಿಕ ಅಧಿಕಾರಿಯನ್ನು ಶೀಘ್ರವೇ ನೇಮಿಸಲಾಗುತ್ತದೆ ಎಂದು ಪಾರೇಖ್ ತಿಳಿಸಿದರು.
ಪ್ರಸಕ್ತ ಸಂಕಷ್ಟಮಯ ಪರಿಸ್ಥಿತಿ ಎದುರಿಸಿ, ಹಣದ ಹರಿವು ಸುಸೂತ್ರವಾಗುವ ನಿಟ್ಟಿನಲ್ಲಿ ನಿಗದಿತ ಅವಧಿಗೆ ಮುನ್ನವೇ ಬಾಕಿ ಪಾವತಿ ಮಾಡುವಂತೆ ಹೊರಗುತ್ತಿಗೆ ಗ್ರಾಹಕ ಸಂಸ್ಥೆಗಳನ್ನು ಸತ್ಯಂ ಕೋರುವ ಸಾಧ್ಯತೆಗಳಿವೆ ಎಂದು ತಿಳಿಸಿದ ಪಾರೇಖ್, ಲೆಕ್ಕಪತ್ರಗಳ ಮರು ದಾಖಲೀಕರಣಕ್ಕೆ ಮತ್ತು ಡಿಸೆಂಬರ್ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸಲು ಹೊಸ ಲೆಕ್ಕಪತ್ರ ಸಂಸ್ಥೆಯನ್ನು ಮುಂದಿನ 48 ಗಂಟೆಗಳೊಳಗೆ ನೇಮಿಸಲಾಗುತ್ತದೆ ಎಂದು ಹೇಳಿದ ಪಾರೇಖ್, ಶೇರುದಾರರು, ಗ್ರಾಹಕರ ಹಿತರಕ್ಷಣೆಗೆ ಹೊಸ ಮಂಡಳಿ ಬದ್ಧ ಎಂದು ನುಡಿದರು. |