ಸತ್ಯಂ ಹಗರಣ ಕುರಿತಂತೆ ಚರ್ಚಿಸಲು ಫ್ರಧಾನಿ ಮನಮೋಹನ್ ಸಿಂಗ್ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. ಸಂಪುಟ ಸದಸ್ಯರಾದ ಗೃಹ ಸಚಿವ ಚಿದಂಬರಂ , ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ , ವಾಣಿಜ್ಯ ಸಚಿವ ಕಮಲ್ನಾಥ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. ಸತ್ಯಂ ಕಂಪ್ಯೂಟರ್ ಸಂಸ್ಥೆಯಲ್ಲಿ 7 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣ ಕುರಿತಂತೆ ಚರ್ಚಿಸುವುದು ಸಭೆಯ ಮುಖ್ಯ ಉದ್ದೇಶವಾಗಿದ್ದು, ಸತ್ಯಂ ಪುನಶ್ಚೇತನಕ್ಕಾಗಿ ಸರಕಾರ ಆರ್ಥಿಕ ಸಹಾಯ ಸೇರಿದಂತೆ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ದವಾಗಿದೆ ಎಂದು ವಾಣಿಜ್ಯ ಸಚಿವ ಕಮಲ್ನಾಥ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಉನ್ನತ ಮಟ್ಟದ ಸಭೆ ನಡೆಯುವುದಕ್ಕಿಂತ ಮುಂಚೆ ಪ್ರಧಾನಿ ಮನಮೋಹನ್ ಸಿಂಗ್ ವಾಣಿಜ್ಯ ಸಚಿವ ಕಮಲ್ನಾಥ್ ಅವರೊಂದಿಗೆ ಸತ್ಯಂ ಹಗರಣದ ವಿವರಗಳನ್ನು ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ಅಪರಾಧ ತನಿಖಾ ತಂಡ ಪ್ರೈಸ್ ವಾಟರ್ಹೌಸ್ ಕೂಪರ್ಸ್ ಕಚೇರಿಗಳ ಮೇಲೆ ದಾಳಿ ನಡೆಸುತ್ತಿದ್ದು, ಸತ್ಯಂನ ಸ್ವತಂತ್ರ ನಿರ್ದೇಶಕರಾಗಿದ್ದ ರಾಮ್ಮೋಹನ್ ರಾವ್ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆಸತ್ಯಂನ ಮಾಜಿ ಮಧ್ಯಂತರ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಮ್ ಮೈನಾಮ್ಪತಿಯವರನ್ನು ಕೂಡಾ ಸಿಐಡಿ ವಿಭಾಗದ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ. |