ಹಗರಣ ಪೀಡಿತವಾಗಿರುವ ಸತ್ಯಂ ಕಂಪ್ಯೂಟರ್ಸ್ ರಕ್ಷಣೆಗೆ ಕೇಂದ್ರ ಸರಕಾರವು 2000 ಕೋಟಿ ರೂ.ಗಳ ಪ್ಯಾಕೇಜ್ ರೂಪಿಸುತ್ತಿರುವ ಬಗ್ಗೆ ಊಹಾಪೋಹಗಳೆದ್ದಿದ್ದು, ಇದಿನ್ನೂ ಖಚಿತವಾಗಿಲ್ಲ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಸತ್ಯಂ ಕುರಿತು ಮಂಗಳವಾರ ಪರಾಮರ್ಶೆ ಸಭೆ ನಡೆಸಿದ ಬಳಿಕ, ಸರಕಾರವು ಸತ್ಯಂ ರಕ್ಷಣೆಗಾಗಿ 500ರಿಂದ 2000 ಕೋಟಿ ರೂ.ವರೆಗಿನ ಪ್ಯಾಕೇಜ್ ಬಗ್ಗೆ ಯೋಚಿಸುತ್ತಿದೆ ಎಂಬ ಬಗ್ಗೆ ವದಂತಿಗಳು ದಟ್ಟವಾಗಿದ್ದವು. ಆದರೆ ಪ್ರಧಾನಿ ಕಚೇರಿ ಈ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಈ ಮಧ್ಯೆ, ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಸಚಿವ ಕಮಲನಾಥ್, ಸತ್ಯಂಗೆ ಆರ್ಥಿಕ ನೆರವು ಒದಗಿಸುವ ವಿಷಯದಲ್ಲಿ ಸರಕಾರವು ಮುಕ್ತವಾಗಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸತ್ಯಂನ ಮಾಜಿ ಮುಖ್ಯಸ್ಥ ರಾಮಲಿಂಗ ರಾಜು ಮತ್ತು ಇತರ ಕಳಂಕಿತರ ಜತೆ ರಾಜಕಾರಣಿಗಳ ಕೈವಾಡವೂ ಇರುವ ಬಗ್ಗೆ ಸಂದೇಹಗಳು ಮತ್ತಷ್ಟು ದಟ್ಟವಾಗತೊಡಗಿದೆ.
ಈ ಮಧ್ಯೆ, ತೊಂದರೆಯಲ್ಲಿ ಸಿಲುಕಿರುವ ಕಂಪನಿಯಲ್ಲಿ ಹಣದ ಹರಿವಿನ ಬಿಕ್ಕಟ್ಟು ಇದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಸರಕಾರದಿಂದ ನಿಯೋಜನೆಗೊಂಡಿರುವ ಹೊಸ ಆಡಳಿತ ಮಂಡಳಿಯು ಕೇಂದ್ರ ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ. |