ಹಗರಣಪೀಡಿತ ಸತ್ಯಂ ಕಂಪ್ಯೂಟರ್ಸ್ನ ಗ್ರಾಹಕರನ್ನು ತಾನಾಗಿಯೇ ಸಂಪರ್ಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮತ್ತೊಂದು ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್, ಮೆರಿಟ್ ಆಧಾರದಲ್ಲಿ ಒಡಂಬಡಿಕೆಗಳನ್ನು ಪರಿಗಣಿಸಲು ಮುಕ್ತವಾಗಿರುವುದಾಗಿ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸತ್ಯಂ ಗ್ರಾಹಕರ ಬಳಿಗೆ ನಾವಾಗಿಯೇ ತೆರಳದಿರಲು ನಿರ್ಧರಿಸಿದ್ದೇವೆ. ಆದರೆ, ಅವರಾಗಿಯೇ ಬಂದಲ್ಲಿ, ಅವರ ಪ್ರಸ್ತಾಪಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಸ್ವೀಕಾರಾರ್ಹ ಎಂದು ಕಂಡುಬಂದರೆ ನಾವು ವ್ಯವಹಾರ ಮುಂದುವರಿಸುತ್ತೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಎಸ್.ಗೋಪಾಲಕೃಷ್ಣನ್ ಹೇಳಿದ್ದಾರೆ.
ಇತ್ತೀಚೆಗೆ ಸತ್ಯಂನ ಕೆಲವು ಗ್ರಾಹಕರು ತಮ್ಮ ಕೆಲಸಗಳ ಹೊರಗುತ್ತಿಗೆಗಾಗಿ ಇನ್ಫೋಸಿಸ್ ಅನ್ನು ಸಮೀಪಿಸಿದ್ದರೂ, ಕಂಪನಿಯು ಅವರೊಂದಿಗೆ ವ್ಯವಹಾರದ ಕುರಿತು ಚರ್ಚೆ ನಡೆಸಿಲ್ಲ ಎಂದು ತಿಳಿದುಬಂದಿದೆ.
ಸತ್ಯಂನ ಕೆಲವು ಗ್ರಾಹಕರು ನಮಗೂ ತಮ್ಮ ಸೇವೆಗಳ ಹೊರಗುತ್ತಿಗೆ ನೀಡುತ್ತಿದ್ದಾರೆ. ನಾವು ಸತ್ಯಂ ಜೊತೆಗೆ ಯಾವುದೇ ಜಂಟಿ ಯೋಜನೆಗಳನ್ನು ಹೊಂದಿಲ್ಲ. ಅವರಲ್ಲಿ ಕೆಲವರು ನಮಗೆ ಹೊರಗುತ್ತಿಗೆ ನೀಡಲು ಬಯಸಿದರೆ, ಅದರ ಬಗ್ಗೆ ಪರಿಶೀಲಿಸುತ್ತೇವೆ. ಆದರೆ ಯಾವುದಕ್ಕೂ ಅವಸರ ಮಾಡುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದರು.
ಇನ್ಫೋಸಿಸ್ ಕಂಪನಿಯು ಸತ್ಯಂನ ಗ್ರಾಹಕರು ಮತ್ತು ಉದ್ಯೋಗಿಗಳ ಬೇಟೆಯಾಡಲು ಹೊರಟಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಸತ್ಯಂನ ಗ್ರಾಹಕರು, ಉದ್ಯೋಗಿಗಳು, ಹೂಡಿಕೆದಾರರಲ್ಲಿ ವಿಶ್ವಾಸವೃದ್ಧಿ ಮಾಡುವುದು ಸರಕಾರದ ಆದ್ಯತೆಯಾಗಿದೆ ಎಂದು ಹೇಳಿದರು. |