ಹಗರಣಪೀಡಿತ ಸತ್ಯಂ ಕಂಪ್ಯೂಟರ್ಸ್ ಮತ್ತು ಚೆನ್ನೈ ಮೂಲಕ ಮನರಂಜನಾ ಸಂಸ್ಥೆ ಪಿರಮಿಡ್ ಸಾಯಿಮಿರಾದ ಎಲ್ಲ ಶೇರು ವ್ಯವಹಾರಗಳನ್ನು ರದ್ದುಪಡಿಸುವಂತೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಗೆ ಆದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹೂಡಲಾಗಿದೆ.
ಮರುಖರೀದಿ ಘೋಷಣೆಗಳ ಮೂಲಕ ಹೂಡಿಕೆದಾರರಿಗೆ ಆಮಿಷವೊಡ್ಡಲಾಗಿದೆ ಮತ್ತು ಅವರಿಗೆ ವಂಚನೆ ಎಸಗಲಾಗಿದೆ ಎಂಬ ಕಾರಣಕ್ಕೆ ಜನವರಿ 6 ಮತ್ತು 7ರ ನಡುವೆ ನಡೆದಿರುವ ಎಲ್ಲ ವ್ಯವಹಾರಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಆದರೆ, ಅರ್ಜಿದಾರ ಮೋಹನ್ ಲಾಲ್ ಶರ್ಮಾ ಎಂಬ ವಕೀಲರು ಸಲ್ಲಿಸಿರುವ ಈ ಅರ್ಜಿಯ ಕುರಿತು ತ್ವರಿತವಾಗಿ ವಿಚಾರಣಾ ದಿನಾಂಕ ತಿಳಿಸಲು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ನಿರಾಕರಿಸಿದೆ.
ಸತ್ಯಂ ತನ್ನ ಶೇರುಗಳ ಮರು ಖರೀದಿ ಪ್ರಸ್ತಾಪವನ್ನು ಮುಂದೊಡ್ಡಿದ್ದು, ಮಂಡಳಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂಬ ಸತ್ಯಂ ಹೇಳಿಕೆಯ ಬಗ್ಗೆ ಜನವರಿ 6ರಂದು ಮಾಧ್ಯಮಗಳ ವರದಿಗಳನ್ನು ವಕೀಲರು ಉಲ್ಲೇಖಿಸಿದ್ದಾರೆ. ಮಂಡಳಿಯ ನಿರ್ಧಾರ ಹೊರಬೀಳುವ ಮುನ್ನವೇ, 176 ರೂ. ಮುಖಬೆಲೆಯಲ್ಲಿ 246.6 ಲಕ್ಷ ಶೇರುಗಳು ಮಾರಾಟವಾದವು. ಆದರೆ ಸತ್ಯಂ ಹಗರಣ ಬಯಲಾದ ಬೆನ್ನಿಗೇ ಅವುಗಳ ಬೆಲೆ 30 ರೂ.ಗೆ ಪತನಗೊಂಡಿದ್ದವು ಎಂದು ಅವರು ವಿವರಿಸಿದ್ದಾರೆ.
ಖರೀದಿಸಿದ ಶೇರುಗಳ ವ್ಯವಹಾರ ರದ್ದುಗೊಳಿಸುವಲ್ಲಿ ಸೆಬಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. |