ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಕುಟುಂಬದವರು ಮತ್ತು ಹೈದ್ರಾಬಾದ್ನಲ್ಲಿರುವ ರಾಜು ಸಹಚರರು ತೆರಿಗೆ ವಂಚಿಸಿರುವ ಕುರಿತಂತೆ ಕಳೆದ 2002ರಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ದಪಡಿಸಿದ ವರದಿಗೆ ಈದೀಗ ಮರಳಿ ಜೀವ ಬಂದಿದೆ. ಬ್ಯಾಂಕ್ ಉಳಿತಾಯ ಮತ್ತು ಲಾಭವನ್ನು ತೋರಿಸಲು ಖಾತೆಗಳನ್ನು ತಿದ್ದುಪಡಿ ಮಾಡಿದ ಆರೋಪವನ್ನು ಎದುರಿಸುತ್ತಿರುವ ರಾಮಲಿಂಗಾರಾಜು, ಸತ್ಯಂ ಕಂಪೆನಿಯನ್ನು ತೊರೆಯುವಾಗ ಹಣವನ್ನು ತೆಗೆದುಕೊಂಡು ಹೋಗಿಲ್ಲ ಎನ್ನುವ ಹೇಳಿಕೆಯನ್ನು ನಂಬದ ತನಿಖಾ ಅಧಿಕಾರಿಗಳು ರಾಜು ಮತ್ತು ಆತನ ಕುಟುಬಂ ವರ್ಗದವರು ಸುಮಾರು 50 ಬ್ಯಾಂಕ್ ಖಾತೆಗಳನ್ನು ಹೊಂದಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.ಸತ್ಯಂ ರಾಜು ಬೇನಾಮಿ ಹೆಸರುಗಳ ಮೇಲೆ ಬ್ಯಾಂಕ್ ಖಾತೆಗಳನ್ನು ಹೊಂದಿರುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಶಂಕೆಯನ್ನು ವ್ಯಕ್ತಪಡಿಸಿದ್ದು, ಸುಮಾರು 50 ಬ್ಯಾಂಕ್ ಖಾತೆಗಳಲ್ಲಿ ಸುಮಾರು 20ಕೋಟಿ ರೂ.ಗಳ ಠೇವಣಿಯಿರಬಹುದು ಎಂದು ಮೂಲಗಳು ತಿಳಿಸಿವೆ. ಸತ್ಯಂ ಕಂಪ್ಯೂಟರ್ಸ್ನ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು, ಹೈದ್ರಾಬಾದ್ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು 7 ಸಾವಿರ ಏಕರೆ ಭೂಮಿಯನ್ನು ಖರೀದಿಸಿದ್ದು, ರಿಯಲ್ ಎಸ್ಟೇಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಕಂಪೆನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿರಬಹುದು ಎನ್ನುವ ಶಂಕೆಯನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ರಾಮಲಿಂಗಾರಾಜು ಹಿರಿಯ ಮಗ ಬಿ.ತೇಜಾ ರಾಜು ಮೆಟಾಸ್ ಇನ್ಫ್ರಾಸ್ಟ್ರಕ್ಚರ್ ಮುನ್ನಡೆಸುತ್ತಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುಮಾರು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಗುತ್ತಿಗೆಯನ್ನು ಪಡೆದಿದ್ದಾರೆ. ಹೈದ್ರಾಬಾದ್ನ 12 ಸಾವಿರ ಕೋಟಿ ರೂ.ಗಳ ವೆಚ್ಚದ ಮೆಟ್ರೋ ಯೋಜನೆ ಕೂಡಾ ಮೆಟಾಸ್ ಇನ್ಫ್ರಾಸ್ಟ್ರಕ್ಚರ್ ಪಡೆದುಕೊಂಡಿದೆ. |