ಜಾಗತಿಕ ಆರ್ಥಿಕ ಕುಸಿತದಿಂದಾಗಿ ಹೊರಗುತ್ತಿಗೆ ಬೇಡಿಕೆಯಲ್ಲಿ ಇಳಿಮುಖವಾಗಿರುವುದರಿಂದ ಶೇ.2ರಷ್ಟು ಮಾತ್ರ ನಿವ್ವಳ ಲಾಭಗಳಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಪ್ರಕಟಿಸಿದೆ.ದೇಶದ ಪ್ರಮುಖ ಹೊರಗುತ್ತಿಗೆಯನ್ನು ನೀಡುವ ಸಂಸ್ಥೆಯಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ದೇಶದ ಸಾಫ್ಟ್ವೇರ್ ಸೇವೆಯಲ್ಲಿ ನಾಲ್ಕನೇಯ ಸ್ಥಾನವನ್ನು ಪಡೆದು ವಿವಾದದ ಸುಳಿಯಲ್ಲಿ ಸಿಲುಕಿದ ಸತ್ಯಂ ಕಂಪ್ಯೂಟರ್ಸ್ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿಲ್ಲವೆಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಡಿಸೆಂಬರ್ ತಿಂಗಳಿನಲ್ಲಿ 41 ನೂತನ ಗ್ರಾಹಕರ ಸೇರ್ಪಡೆಗೊಳಿಸುವುದರೊಂದಿಗೆ ಕಂಪೆನಿಯ ಒಟ್ಟು ಗ್ರಾಹಕರ ಸಂಖ್ಯೆ 965ಕ್ಕೆ ತಲುಪಿದ್ದು, ಗ್ರಾಹಕರು ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ ಎಂದು ಟಿಸಿಎಸ್ ವಕ್ತಾರ ಚಂದ್ರಶೇಖರನ್ ತಿಳಿಸಿದ್ದಾರೆ.ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಟಾಟಾ ಸಮೂಹದ ಕಂಪೆನಿಯಾಗಿದ್ದು 2007ರಲ್ಲಿ 1,331ಕೋಟಿ ರೂ.ಗಳ ಲಾಭಗಳಿಸಿದ್ದು,2008ರ ಡಿಸೆಂಬರ್ ತಿಂಗಳಿನಲ್ಲಿ 1,352 ಕೋಟಿ ರೂ.ಗಳ ಲಾಭಗಳಿಸಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |