ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು ಎಸಗಿದ ಆರ್ಥಿಕ ವಂಚನೆಯಿಂದಾಗಿ ತತ್ತರಿಸಿದ ಸತ್ಯಂ ಕಂಪ್ಯೂಟರ್ಸ್, ಕೇಂದ್ರ ಸರಕಾರದ ಪ್ಯಾಕೇಜ್ ತಿರಸ್ಕರಿಸಿದ್ದು, ಕಂಪೆನಿಯ ಆರ್ಥಿಕತೆಯನ್ನು ಬಲಪಡಿಸಲು ಇಂದು ಅಡಳಿತ ಮಂಡಳಿಯ ಸಭೆ ನಡೆಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಸತ್ಯಂನ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು ಕಳೆದ ಹಲವು ವರ್ಷಗಳಿಂದ ಬ್ಯಾಂಕ್ ದಾಖಲೆಗಳನ್ನು ತಿರುಚಿರುವುದಾಗಿ ಒಪ್ಪಿಕೊಂಡು ರಾಜೀನಾಮೆ ನೀಡಿದ ನಂತರ ಅಸ್ತಿತ್ವ ಉಳಿಸಿಕೊಳ್ಳಲು, ದೇಶದ ಸಾಫ್ಟ್ವೇರ್ ರಫ್ತು ಸೇವೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸತ್ಯಂ ಹೋರಾಟ ನಡೆಸುತ್ತಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರಕಾರ ಸತ್ಯಂ ಕಂಪೆನಿಗೆ ನೇರ ಬೆಂಬಲ ಅಥವಾ ಪ್ರಸಕ್ತ ಸಂದರ್ಭದಲ್ಲಿ ಉತ್ತೇಜನ ಪ್ಯಾಕೇಜ್ ನೀಡಲು ಬಯಸಿಲ್ಲ ಎಂದು ಹೇಳಿದ್ದಾರೆ. ಸತ್ಯಂ ಕಂಪ್ಯೂಟರ್ಸ್ಗೆ ಇತರ ಕಂಪೆನಿಗಳಿಂದ 17 ಬಿಲಿಯನ್ ಡಾಲರ್ ಹಣ ಬರಬೇಕಾಗಿದ್ದು, ನಿಗದಿತ ಅವಧಿಯಲ್ಲಿ ಹಣವನ್ನು ಮರಳಿ ಪಡೆದಲ್ಲಿ ಇತರ ಮೂಲಗಳ ಹಣಕಾಸಿನ ಅಗತ್ಯವಿರುವುದಿಲ್ಲ. ಅಗತ್ಯವಾದಲ್ಲಿ ಬ್ಯಾಂಕ್ ಸಾಲವನ್ನು ಪಡೆಯಲಾಗುವುದು ಎಂದು ಎಚ್ಡಿಎಫ್ಸಿ ಮುಖ್ಯಸ್ಥ ಹಾಗೂ ಸತ್ಯಂ ಅಡಳಿತ ಮಂಡಳಿಯ ಸದಸ್ಯರಾದ ದೀಪಕ್ ಪಾರೇಖ್ ಸ್ಪಷ್ಟವಾಗಿ ತಿಳಿಸಿದ್ದಾರೆ ಸತ್ಯಂ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಸರಕಾರ ಸತ್ಯಂ ಅಡಳಿತ ಮಂಡಳಿಯನ್ನು ವಜಾ ಮಾಡಿ ಮೂವರು ನೂತನ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. |