ಕಳಂಕಿತ ಸತ್ಯಂನ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಹಣವನ್ನು ಮೆಟಾಸ್ ಕಂಪೆನಿಗಳಿಗೆ ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್ಚಂದ್ ಗುಪ್ತಾ ಹೇಳಿದ್ದಾರೆ.ಸತ್ಯಂ ಬ್ಯಾಲೆನ್ಸ್ಶೀಟ್ನಲ್ಲಿ ತೋರಿಸಲಾಗಿರುವ ಅಂಕಿ ಅಂಶಗಳು ಸಮರ್ಪಕವಾಗಿರದೇ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಸಾಬೀತಾಗಿದೆ. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಸ್ತಾಪ ಸಧ್ಯಕ್ಕಿಲ್ಲ ಎಂದು ಸಚಿವ ಗುಪ್ತಾ ತಿಳಿಸಿದ್ದಾರೆ. ಸತ್ಯಂನ ರಾಜು ಕುಟುಂಬ ಸಂಚಾಲಿತ ಮೆಟಾಸ್ ಕಂಪೆನಿಗೆ ಹಣವನ್ನು ವರ್ಗಾವಣೆ ಮಾಡಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ತನಿಖಾ ತಂಡಗಳು ಮೆಟಾಸ್ ಆಸ್ತಿ, ರಿಯಲ್ ಎಸ್ಟೇಟ್ ಉದ್ಯಮದ ಆರ್ಥಿಕ ಅಂಶಗಳನ್ನು ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಕೆಲ ವರ್ಷಗಳ ಹಿಂದೆ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದ ಮೆಟಾಸ್ ಕಂಪೆನಿ, ಕೇವಲ ಮೂರು ನಾಲ್ಕು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುವುದು ಹೇಗೆ ಸಾಧ್ಯ? ಹೈದ್ರಾಬಾದ್ನಲ್ಲಿ 7 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿರುವುದು ಮತ್ತು ಹಿಮಾಚಲ ಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಆಂಧ್ರ ಪ್ರದೇಶ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ 30 ಸಾವಿರ ಕೋಟಿಗೂ ಹೆಚ್ಚಿನ ಟೆಂಡರ್ ಪಡೆದಿರುವುದು ಹಲವು ಅನುಮಾನಗಳಿಗೆ ಏಡೆಮಾಡಿದೆ ಎಂದು ಸಚಿವ ಗುಪ್ತಾ ಶಂಕೆ ವ್ಯಕ್ತಪಡಿಸಿದ್ದಾರೆ. |