ಕಳಂಕಿತ ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಾಲಿಂಗಾರಾಜು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜನೆವರಿ 22ರ ವರೆಗೆ ಮುಂದೂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.ದೇಶದ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ, ರಾಜು ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುವುದನ್ನು ಕೂಡಾ ಜನೆವರಿ 22ಕ್ಕೆಮುಂದೂಡಲಾಗಿದೆ ಎನ್ನಲಾಗಿದೆ. ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು, ಸಹೋದರ ರಾಮಾರಾಜು ಮತ್ತು ಸತ್ಯಂನ ಮಾಜಿ ಆರ್ಥಿಕ ವಿಭಾಗದ ಮುಖ್ಯಸ್ಥ ವಡ್ಲಾಮನಿ ಶ್ರೀನಿವಾಸ್ ಅವರ ಜಾಮೀನು ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಜನೆವರಿ 22ಕ್ಕೆ ಮುಂದೂಡಿದೆ. ರಾಮಲಿಂಗಾರಾಜು ಎಸಗಿದ ಆರ್ಥಿಕ ವಂಚನೆಯಲ್ಲಿ ಸಹೋದರ ರಾಮಾರಾಜು ಹಾಗೂ ಸತ್ಯಂನ ಮಾಜಿ ಸಿಎಫ್ಒ ವಡ್ಲಾಮನಿ ಶ್ರೀನಿವಾಸ್ ಪರಸ್ಪರ ಸಹಕರಿಸಿದ್ದಾರೆ ಎಂದು ಅಪರಾಧ ಪತ್ತೆ ದಳ ಆರೋಪ ಹೊರಿಸಿದೆ. ಆದರೆ ತನಿಖೆಗೆ ಸಹಕಾರಿಯಾಗುವಂತಹ ಯಾವುದೇ ವಿಷಯಗಳು ಲಭ್ಯವಾಗಿಲ್ಲ ಎಂದು ಹೇಳಿದೆ. ಸತ್ಯಂನ 7 ಸಾವಿರ ಕೋಟಿ ಹಗರಣದಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದು, ಚಂಚಲ್ಗುಡಾ ಕಾರಾಗ್ರಹದಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಲಯಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |