ಕೈಗಾರಿಕೆ ಉತ್ಪಾದನೆ ಕುಸಿತ ಹಾಗೂ ರಫ್ತು ವಹಿವಾಟಿನಲ್ಲಿ ಇಳಿಕೆಯಿಂದಾಗಿ ಕಳವಳ ವ್ಯಕ್ತಪಡಿಸಿದ ಸರಕಾರ ದೇಶಿಯ ಉದ್ಯಮದ ಪುನಶ್ಚೇತನಕ್ಕೆ ಮತ್ತಷ್ಟು ಪ್ಯಾಕೇಜ್ಗಳನ್ನು ಘೋಷಿಸಲು ಸಿದ್ದತೆ ನಡೆಸಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್ನಾಥ್ ಹೇಳಿದ್ದಾರೆ.ದೇಶಿಯ ಉತ್ಪಾದನೆಯನ್ನು ಹೆಚ್ಚಿಸಲು ಸರಕಾರ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತಿದ್ದು, ಮತ್ತಷ್ಟು ಪ್ಯಾಕೇಜ್ಗಳನ್ನು ಘೋಷಿಸಲು ತೀರ್ಮಾನಿಸಿದೆ ಎಂದು ಸಚಿವ ಕಮಲ್ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ಮೀಸಲಾಗಿಡುವುದರಿಂದ ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಕೇಂದ್ರ ಸರಕಾರ ಈಗಾಗಲೇ ಎರಡು ಪ್ಯಾಕೇಜ್ಗಳನ್ನು ಘೋಷಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರಗಳನ್ನು ಕಡಿತಗೊಳಿಸಿ 3,20,000 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 30 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆಯ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. |