ಸತ್ಯಂ ಕಂಪ್ಯೂಟರ್ಸ್ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಅವರ ಉನ್ನತಿಗೆ ತಾವು ಕಾರಣಿಭೂತರು ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ .ರಾಜಶೇಖರ್ರೆಡ್ಡಿ, ರಾಜು ಉನ್ನತಿಗೆ ಟಿಡಿಪಿ ನಾಯಕ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾರಣಿಭೂತರಾಗಿದ್ದಾರೆ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾದಾಗ ರಾಜು ಉನ್ನತಮಟ್ಟವನ್ನು ತಲುಪಿದ್ದರು. ಅವರಿಗೆ ನನ್ನ ಬೆಂಬಲದ ಅವಶ್ಯಕತೆಯಿರಲಿಲ್ಲ . ಆದ್ದರಿಂದ ರಾಜು ಉನ್ನತಿಗೆ ನಾನು ಕಾರಣವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಬಿಲ್ಕ್ಲಿಂಟನ್ ಕಳೆದ 2000ರಲ್ಲಿ ಹೈದ್ರಾಬಾದ್ಗೆ ಭೇಟಿ ನೀಡಿದಾಗ ರಾಜು ವೇದಿಕೆಯನ್ನು ಹಂಚಿಕೊಳ್ಳಲು ನಾಯ್ಡು ಕಾರಣರಾಗಿರುವುದು ಅವರ ಉನ್ನತಿಗೆ ನಾಂದಿಯಾಗಿರಬಹುದು ಎಂದು ನುಡಿದರು.
ತೆಲಂಗಾಣ ಸಮಸ್ಯೆಯ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಸಮನ್ಸ್ ಜಾರಿಗೊಳಿಸಿದ್ದು, ಸತ್ಯಂ ಪ್ರಕರಣದಿಂದಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ರೆಡ್ಡಿ ಹೇಳಿದ್ದಾರೆ. |