ಕಳಂಕಿತ ಸತ್ಯಂ ಕಂಪ್ಯೂಟರ್ ಹಾಗೂ ರಾಜು ಕುಟುಂಬ ಸಂಚಾಲಿತ ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್ಫ್ರಾಸ್ಟ್ರಕ್ಚರ್ ನಡುವಣ ಹೊಂದಾಣಿಕೆಗಳು ಕಂಡುಬಂದಿರುವುದರಿಂದ ಗಂಭೀರ ವಂಚನೆ ಪ್ರಕರಣವನ್ನು ತನಿಖೆ ನಡೆಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಸತ್ಯಂ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳು,ಸತ್ಯಂ ಕಂಪ್ಯೂಟರ್ಸ್ ಹಾಗೂ ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್ಫ್ರಾಸ್ಟ್ರಕ್ಚರ್ ನಡುವಣ ಆರ್ಥಿಕ ಹೊಂದಾಣಿಕೆಗಳು ಕಂಡುಬಂದಿರುವುದಾಗಿ ತಿಳಿಸಿದ್ದಾರೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಹೇಳಿದ್ದಾರೆ.
ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗಳ ಮಾಹಿತಿ, ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಪುಸ್ತಕಗಳ ಬಗ್ಗೆ ಮಾಹಿತಿ ಸಂಗ್ರಹಣೆ ಅಗತ್ಯವಾಗಿದ್ದು,ತನಿಕಾಧಿಕಾರಿಗಳಿಗೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಸಚಿವ ಗುಪ್ತಾ ತಿಳಿಸಿದ್ದಾರೆ.
ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಗೆ ಉಭಯ ಮೆತಾಸ್ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಿಫಲವಾದ ಏಳು ದಿನಗಳ ನಂತರ, ಸತ್ಯಂ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು ಜನೆವರಿ 7 ರಂದು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿ7800 ಕೋಟಿ ರೂ.ಗಳನ್ನು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದರು.
ಕಳೆದ ಹಲವು ವರ್ಷಗಳಿಂದ ತಾವು ಕಂಪೆನಿಯ ದಾಖಲೆಗಳನ್ನು ತಿರುಚಿರುವುದಾಗಿ ಒಪ್ಪಿಕೊಂಡು, ಮೆತಾಸ್ ಕಂಪೆನಿಗಳನ್ನು ಸತ್ಯಂನಲ್ಲಿ ವೀಲಿನಗೊಳಿಸಿ ವಾಸ್ತವದ ಲೆಕ್ಕಾಚಾರಕ್ಕೆ ಹೊಂದಾಣಿಕೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ರಾಜು ತಿಳಿಸಿದ್ದಾರೆ
ಈಗಾಗಲೇ ಸತ್ಯಂ ಕಂಪ್ಯೂಟರ್ ವಂಚನೆ ಪ್ರಕರಣ ಕುರಿತಂತೆ ಗಂಭೀರ ವಂಚನೆ ಅಪರಾಧ ಪತ್ತೆ ದಳದಿಂದ ತನಿಖೆ ಆರಂಭವಾಗಿದ್ದು ಮೂರು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸರಕಾರ ತನಿಖಾಧಿಕಾರಿಗಳಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. |