ಸತ್ಯಂ ವಂಚನೆ ಹಗರಣ ಹೊರಬಂದ ಎರಡು ವಾರಗಳ ನಂತರ ನೂತನ ನಿರ್ದೇಶಕ ಮಂಡಳಿಯ ಸದಸ್ಯ ದೀಪಕ ಪಾರೇಖ್ ಮಾತನಾಡಿ, ಆರ್ಥಿಕ ಸುವ್ಯವಸ್ಥೆ ಹಾಗೂ ದೇಶ ವಿದೇಶಗಳಲ್ಲಿರುವ ಗ್ರಾಹಕರ ಮನವೊಲಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.ಸತ್ಯಂನ ನೂತನ ನಿರ್ದೇಶಕ ಮಂಡಳಿ, ವಹಿವಾಟನ್ನು ಮುಂದುವರಿಸಲು ಅಗತ್ಯವಾಗಿರುವ ಆರ್ಥಿಕ ನೆರವನ್ನು ಪಡೆಯಲು ಬ್ಯಾಂಕ್ಗಳೊಂದಿಗೆ, ಹೂಡಿಕೆದಾರ ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಪಾರೇಖ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ನಾವು ಆರ್ಥಿಕ ಸಹಾಯವನ್ನು ಪಡೆಯಲು ನಿರ್ಧರಿಸಿದ್ದೇವೆ. ಆದರೆ ಕಂಪೆನಿಯ ಆರ್ಥಿಕ ವಹಿವಾಟಿನ ಪರಿಶೀಲನೆಯ ನಂತರ ಉಳಿದ ಮೊತ್ತವನ್ನು ಆಧರಿಸಿ ಬ್ಯಾಂಕ್ಗಳು ಸಾಲ ನೀಡಲು ಸಿದ್ದವಾಗಿವೆ ಎಂದು ತಿಳಿಸಿದ್ದಾರೆ. ಸತ್ಯಂ ನೂತನ ನಿರ್ದೇಶಕ ಮಂಡಳಿ ಜನೆವರಿ 22 ರಂದು ಸಭೆ ಸೇರಲಿದ್ದು, ಸಭೆಯಲ್ಲಿ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕ ಹಾಗೂ ಕಂಪೆನಿಗೆ ಅಗತ್ಯವಾದ ಆರ್ಥಿಕ ಕ್ರೂಢಿಕರಣ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ದೇಶದ ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವ ಸತ್ಯಂ ಕಂಪ್ಯೂಟರ್ನ ನಿರ್ದೇಶಕ ಮಂಡಳಿ, ದೇಶ ವಿದೇಶಗಳ ಗ್ರಾಹಕರ ಮನವೊಲಿಸಲು ಪ್ರಯತ್ನಿಸುತ್ತಿದೆ. ಆದರೆ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪಾರೇಖ್ ಹೇಳಿದ್ದಾರೆ. |