ಸತ್ಯಂ ಗೋಲ್ಮಾಲ್ ಪ್ರಕರಣದ ಆರೋಪಿಗಳಾದ, ಸಂಸ್ಥಾಪಕ ರಾಮಲಿಂಗಾ ರಾಜು ಮತ್ತು ಇತರ ನಾಲ್ವರು ಆರೋಪಿಗಳ ಮಾದರಿ ಸಹಿಯನ್ನು ಸಿಬಿಐ ಗುರವಾರ ಸಂಗ್ರಹಿಸಿದೆ.
ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು, ಅವರ ಸಹೋದರ ರಾಮ ರಾಜು, ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಮತ್ತು ಇಬ್ಬರು ಮಾಜಿ ಲೆಕ್ಕಪರಿಶೋಧಕರಾಗಿರುವ ಎಸ್.ಗೋಪಾಲಕೃಷ್ಣನ್ ಮತ್ತು ತಲ್ಲುರಿ ಶ್ರೀನಿವಾಸ್ ಅವರ ತಲಾ 60 ಸಹಿಗಳನ್ನು ಸಿಬಿಐ ಆರೋಪಿಗಳ ವಕೀಲರ ಸಮಕ್ಷಮದಲ್ಲಿ ನ್ಯಾಯಾಲಯದಲ್ಲಿ ಪಡೆಯಿತು.
ಆರೋಪಿಗಳನ್ನು ಚಂಚಲಗುಡ್ಡ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಪೊಲೀಸ್ ವ್ಯಾನಿನಲ್ಲಿ ಕರೆತರಲಾಯಿತು. ಅವರ ಸಹಿ ಸಂಗ್ರಹದ ಬಳಿಕ ತಕ್ಷಣವೇ ಅವರನ್ನು ಮರಳಿ ಜೈಲಿಗೆ ಕಳುಹಿಸಲಾಯಿತು.
ಸತ್ಯಂ ಸಂಸ್ಥೆಯಿಂದ ವಶಪಡಿಸಿಕೊಳ್ಳಲಾಗಿರುವ ದಾಖಲೆ ಪತ್ರಗಳಲ್ಲಿರುವ ಸಹಿಯೊಂದಿಗೆ ಹೋಲಿಸಲು ಇವರ ಸಹಿ ಸಂಗ್ರಹಿಸಲು ಸಿಬಿಐ ನ್ಯಾಯಾಲಯದ ಅನುಮತಿ ಪಡೆದಿತ್ತು. |