ಬಹುಕೋಟಿ ಅವ್ಯವಹಾರದಿಂದ ತತ್ತರಿಸಿರುವ ಸತ್ಯಂ ಕಂಪೂಟರ್ ಸರ್ವೀಸಸ್ ಸಂಸ್ಥೆಯನ್ನು ಖರೀದಿಸುವವರಿಂದ ರಾಮಲಿಂಗ ರಾಜು ಕುಟುಂಬ ಪರಿಹಾರ ಕೇಳಲು ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ.
ಸಂಸ್ಥೆಯ ಖರೀದಿ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದಾಗಲೇ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ರಾಜು ಕುಟುಂಬ ಸುಮಾರು 2000 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಬೇಡಿಕೆಯಿಡುವ ಸಾಧ್ಯತೆಯಿದೆ.
ಸತ್ಯ ಉದ್ಯೋಗಿಗಳಿಗೆ ಸಂಬಳ ನೀಡಲು ಮತ್ತು ಕಂಪನಿಯ ಲೆಕ್ಕಾಚಾರಗಳನ್ನು ಸರಿದೂಗಿಸಲು ತನ್ನ ಕುಟುಂಬವು ಜನವರಿ 7ರಂದು 1230 ಕೋಟಿ ರೂಪಾಯಿಗಳನ್ನು ತೊಡಗಿಸಿತ್ತು ಎಂದು ರಾಜು ಇದೀಗ ಪತ್ರ ಬರೆದಿದ್ದಾರೆ.
ಹಲವಾರು ಕಂಪನಿಗಳು ಇದೀಗ ಸತ್ಯ ಖರೀದಿಗೆ ಮುಂದೆ ಬಂದಿರುವ ಕಾರಣ ರಾಜು ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದು, ಆಸ್ತಿ ಮೇಲಿನ ಹಕ್ಕನ್ನು ಪಡೆದುಕೊಳ್ಳಲು ರಾಜು ಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರಿಂದಾಗಿ ಸಂಭಾವ್ಯ ಖರೀದಿದಾರ ಸಂಸ್ಥೆಗಳು ಚಿಂತೆಗೊಳಗಾಗಿವೆ. ಈ ಬಗ್ಗೆ ರಾಜು ಅವರ ವಕೀಲರನ್ನು ಪ್ರಶ್ನಿಸಿದಾಗ, "ಈ ಬಗ್ಗೆ ನನಗೇನೂ ತಿಳಿದಿಲ್ಲ. ಯಾವುದೇ ಪ್ರತಿಕ್ರಿಯೆಯನ್ನು ನಾನು ನೀಡಲಾರೆ" ಎಂದಿದ್ದಾರೆ.
|