ಥೈಲ್ಯಾಂಡ್ನ ಪಟ್ಟಾಯಂನಲ್ಲಿ ನಡೆಯುತ್ತಿದ್ದ ಇಂಡೋ-ಏಷಿಯನ್ ಶೃಂಗಸಭೆಯಲ್ಲಿ ಸರಕಾರಿ ವಿರೋಧಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಸಭೆಯನ್ನು ರದ್ದುಗೊಳಿಸಿದ್ದು, ಉಪಸ್ಥಿತರಿದ್ದ ನಾಯಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹೆಲಿಕಾಪ್ಟರ್ಗಳನ್ನು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಹಾಜರಿದ್ದ ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್ನಾಥ್ ಅವರು ಸುರಕ್ಷಿತವಾಗಿದ್ದಾರೆ ಎಂದು ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ತಕ್ಸಿನ್ ಸಗಿನ್ವಾತ್ರ ಅವರ ಬೆಂಬಲಿಗರು ಶೃಂಗಸಭೆ ನಡೆಯುವ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿ ಪ್ರಧಾನಿಯವರ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಥೈಲ್ಯಾಂಡ್ನಲ್ಲಿ ದೇಶದಾದ್ಯಂತ ತುರ್ತುಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 2008ರಲ್ಲಿ ಮೊದಲ ಬಾರಿಗೆ ಇಂಡೋ-ಏಷಿಯನ್ ಶೃಂಗಸಭೆಯನ್ನು ಆಯೋಜಿಸಿ ರದ್ದುಗೊಳಿಸಲಾಗಿತ್ತು. ಇಂದಿನ ಶೃಂಗಸಭೆ ಕೂಡಾ ಎರಡನೇ ಬಾರಿಗೆ ರದ್ದುಗೊಂಡಿದ್ದರಿಂದ ನವದೆಹಲಿ ಮತ್ತು ಹತ್ತು ರಾಷ್ಟಗಳ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಂದಕ್ಕೆ ಹಾಕಲಾಗಿದೆ. |