ಮೊಬೈಲ್ ಮತ್ತು ಕೇಬಲ್ ನಿರ್ವಾಹಕರು ಜನರನ್ನು ವಂಚಿಸುತ್ತಿದ್ದಾರೆಂದು ಅನೇಕ ವರ್ಷಗಳಿಂದ ಗ್ರಾಹಕರು ದೂರುತ್ತಾ ಬಂದಿದ್ದು, ಆ ದೂರಿಗೆ ಸುಪ್ರೀಂಕೋರ್ಟ್ ಕೂಡ ಧ್ವನಿಗೂಡಿಸಿದೆ. ಮೊಬೈಲ್ ಮತ್ತು ಕೇಬಲ್ ನಿರ್ವಾಹಕರು ಜನರನ್ನು ಲೂಟಿ ಮಾಡುತ್ತಿದೆಯೆಂದು ಸುಪ್ರೀಂ ಕೋರ್ಟ್ ಖಾರವಾದ ಮಾತುಗಳಲ್ಲಿ ಹೇಳಿದೆ.
ಮೊಬೈಲ್ ಸೇವಾ ಸಂಸ್ಥೆಗಳಿಂದ ಮತ್ತು ಸ್ಥಳೀಯ ಕೇಬಲ್ ನಿರ್ವಾಹಕರು ದುಪ್ಪಟ್ಟು ಬಿಲ್ ದರಗಳನ್ನು ವಿಧಿಸುವ ಮೂಲಕ ಗ್ರಾಹಕರು ಯಾತನೆ ಪಡುತ್ತಿರುವ ಸಂಗತಿ ಸುಪ್ರೀಂಕೋರ್ಟ್ ವಿಶೇಷವಾಗಿ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಗಮನ ಸೆಳೆದರು.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ದರ ನಿಯಂತ್ರಣವನ್ನು ರದ್ದು ಮಾಡಿದ್ದರಿಂದ ಪ್ರಸಾರಕರು ಜನಪ್ರಿಯ ಚಾನೆಲ್ ಜತೆ ಜನಪ್ರಿಯವಲ್ಲದ ಚಾನೆಲ್ ಕೂಡ ಸೇರಿಸಿ ಅದನ್ನು ಬೊಕೆಟ್ನಂತೆ ನೀಡಿ ಎಲ್ಲವನ್ನೂ ಸ್ವೀಕರಿಸಬೇಕೆಂಬ ಷರತ್ತು ವಿಧಿಸುತ್ತದಾದ್ದರಿಂದ ಪ್ರಸಾರಕರ ಕರುಣೆಯಲ್ಲಿ ಗ್ರಾಹಕರು ಇರಬೇಕಾಗಿದೆಯೆಂದು ಆರೋಪಿಸಿ ಪ್ರಾಧಿಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಜೆಐ ಮತ್ತು ನ್ಯಾಯಮೂರ್ತಿ ಸದಾಸಿವಂ ಅವರಿದ್ದ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.
ನಿಯಂತ್ರಣ ಸಂಸ್ಥೆಯು ದರದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಮರುಪರಿಶೀಲನೆಗೆ ಇಚ್ಛಿಸಿದೆ. ಆದರೆ ಮಧ್ಯಂತರವಾಗಿ 2004ರ ದರ ರಚನೆಯನ್ನು ನೀಡಬೇಕೆಂಬ ಪ್ರಸಾರಕರ ಕೋರಿಕೆ ತಿರಸ್ಕರಿಸಿರುವುದಾಗಿ ಟ್ರಾಯ್ ವಕೀಲ ಹರೀಶ್ ಸಾಲ್ವೆ ತಿಳಿಸಿದರು.
2004ರ ಸಾಲಿನ ದರವನ್ನು ಜಾರಿಗೆ ತಂದರೆ 13 ಮಿಲಿಯ ಹೊಸ ಗ್ರಾಹಕರು ಮತ್ತು 2004ರ ನಂತರ ಅಸ್ತಿತ್ವಕ್ಕೆ ಬಂದ 260 ಚಾನೆಲ್ಗಳು ನಿಯಂತ್ರಕರ ವ್ಯಾಪ್ತಿಯಿಂದ ಹೊರಕ್ಕುಳಿಯುತ್ತದೆಂದು ತಿಳಿಸಿದೆ.
|