ಜಾಗತಿಕ ಆರ್ಥಿಕ ಕುಸಿತ ವರ್ಷಾಂತ್ಯದವರೆಗೆ ಪ್ರಭಾವ ಬೀರಲಿದ್ದು, ದೇಶದ ಆರ್ಥಿಕತೆ ಅಕ್ಟೋಬರ್ ತಿಂಗಳ ನಂತರ ಮಹತ್ತರ ಬೆಳವಣಿಗೆ ಕಾಣಲಿದೆ ಎಂದು ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಸಿ. ರಂಗರಾಜನ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಿದಾನಗತಿಯಲ್ಲಿ ಕುಸಿತ ಕಾಣುತ್ತಿದ್ದು, ಕಳೆದ ವರ್ಷ ಜಿಡಿಪಿ ದರ ಶೇ. 9 ರಷ್ಟಿದ್ದು, ಪ್ರಸಕ್ತ ವರ್ಷದಲ್ಲಿ ಶೇ.7ಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು "ಇಂಪ್ಯಾಕ್ಟ್ ಆನ್ ಇಂಡಿಯನ್ ಎಕಾನಮಿ" ಕುರಿತು ಆಯೋಜಿಸಿದ ವಿಚಾರ ಸಂಕೀರಣದಲ್ಲಿ ರಂಗರಾಜನ್ ಮಾತನಾಡುತ್ತಿದ್ದರು.
ಭಾರತದಲ್ಲಿ 2009ರ ಅಕ್ಟೋಬರ್ ತಿಂಗಳ ನಂತರ ಆರ್ಥಿಕತೆಯಲ್ಲಿ ಸುಧಾರಣೆ ಕಾಣಲಿದ್ದು, 2010-11ರಲ್ಲಿ ಮಹತ್ತರ ಅಭಿವೃದ್ಧಿ ಸಾಧಿಸಲಿದೆ ಎಂದು ರಂಗರಾಜನ್ ಭವಿಷ್ಯ ನುಡಿದರು.
ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕಳೆದ ಎರಡು ತ್ರೈಮಾಸಿಕಗಳಲ್ಲಿ ನಷ್ಟವನ್ನು ಅನುಭವಿಸಿವೆ. ಆರ್ಥಿಕ ಕುಸಿತದ ಅವಧಿ ಮತ್ತು ಆಳವನ್ನು ಸಧ್ಯ ಉಹೆ ಮಾಡುವುದು ಕಷ್ಟವಾಗಿದೆ ಎಂದು ರಂಗರಾಜನ್ ತಿಳಿಸಿದ್ದಾರೆ. |