ಬೆಂಗಳೂರು: ಸತ್ಯಂನ ಮುಂದಿನ ಸಿಇಒ ಯಾರು? ಇದೀಗ ಮಿಲಿಯನ್ ಡಾಲರ್ ಪ್ರಶ್ನೆ. ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಟೆಕ್ ಮಹೀಂದ್ರ ಶೇ.51ರಷ್ಟು ಪಾಲು ಪಡೆದ ನಂತರ ಖಂಡಿತವಾಗಿ ತನ್ನದೇ ಸಿಇಒ ಒಬ್ಬರನ್ನು ಸತ್ಯಂ ಕಂಪ್ಯೂಟರ್ಸ್ನಲ್ಲಿ ಕೂರಿಸುವುದಂತೂ ನಿಜ ಎಂಬುದು ಹಲವವನ್ನು ಕಾಡುತ್ತಿದೆ.ಸರ್ಕಾರದಿಂದಲೇ ದೀಪಕ್ ಪರೇಖ್ ನೇತೃತ್ವದ ಮಂಡಳಿಯಿಂದ ಸತ್ಯಂನ ಹಾಲಿ ಸಿಇಒ ಎ.ಎಸ್.ಮೂರ್ತಿ ನಾಮನಿರ್ದೇಶಿತಗೊಂಡಿದ್ದರು. ಆದರೆ ಇದು ತಾತ್ಕಾಲಿಕ ಎಂಬುದು ಎಲ್ಲರಿಗೂ ತಿಳಿದಿತ್ತು. ಉದ್ಯಮದ ಮೂಲಗಳ ಪ್ರಕಾರ ಇದೀಗ ಟೆಕ್ ಮಹೀಂದ್ರಾ ಖರೀದಿಯ ನಂತರ ಸತ್ಯಂನ ಉನ್ನತ ಹುದ್ದೆಯಲ್ಲಿ ಹೊರಗಿನಿಂದ ಆಮದಾದದ ಹೊಸ ಸಿಇಒ ಒಬ್ಬರನ್ನು ಉನ್ನತ ಹುದ್ದೆಯಲ್ಲಿ ಕೂರಿಸಬಹುದು ಎಂಬುದು ಹಲವರ ಲೆಕ್ಕಾಚಾರ. ಭಾರತದ ಪ್ರಮುಖ ಮೂರು ಐಟಿ ಕಂಪನಿಗಳಿಂದಲೇ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂಭವವಿದೆ. ಅಲ್ಲದೆ, ಮೂಲಗಳ ಪ್ರಕಾರ, ಟೆಕ್ ಮಹೀಂದ್ರ ತನ್ನದೇ ಮಹೀಂದ್ರಾ ಬಳಗದಿಂದಲೇ ಒಬ್ಬರನ್ನು ಸತ್ಯಂ ಉನ್ನತ ಹುದ್ದೆಯ ಕುರ್ಚಿಯಲ್ಲಿ ಕೂರಿಸುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ.ಹೊರಗಿನ ವ್ಯಕ್ತಿಯನ್ನು ಕರೆತಂದು ಉನ್ನತ ಹುದ್ದೆಯಲ್ಲಿ ಕೂರಿಸಬೇಕಾದರೆ ಸಾಕಷ್ಟು ಅಂಶಗಳು ಇಲ್ಲಿ ಮುಖ್ಯವೆನಿಸುತ್ತದೆ. ಕಳಂಕಿತ ಸತ್ಯಂನ ಒತ್ತಡವನ್ನು ಭರಿಸುವ ತಾಕತ್ತಿನ ಜತೆಗೆ ಎಲ್ಲ ಹೊಸ ಮುಖ್ಯಸ್ಥರ ಜತೆಗೆ ವ್ಯವಹರಿಸುವ ಸವಾಲೂ ಇರಬೇಕಾಗುತ್ತದೆ. ಅದಕ್ಕಾಗಿ ಹೊರಗಿನವರನ್ನು ತಂದು ಸತ್ಯಂನ ಉನ್ನತ ಹುದ್ದೆಯಲ್ಲಿ ಕೂರಿಸುವ ಬದಲು ಒಳಗಿನ ಹಿರಿಯರಲ್ಲೇ ಒಬ್ಬರನ್ನು ಆರಿಸುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ.ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ವಿನೀತ್ ನಯ್ಯರ್, ಮಹೀಂದ್ರ ಒಡೆತನದ ಎಲ್ಲ ಸಂಸ್ಥೆಗಳಿಗೂ ಮುಖ್ಯಸ್ಥರಾಗುವ ಸಂಭವವಿದೆ. ಜತೆಗೆ ಸಂಜಯ್ ಕಾಲ್ರಾ ಅಧ್ಯಕ್ಷರಾಗಿದ್ದಾರೆ. ಕಾಲ್ರಾ ಟೆಕ್ ಮಹೀಂದ್ರಾದ ಎಲ್ಲ ಬ್ರಿಟೀಷ್ ಟೆಲಿಕಾಂ ಒಪ್ಪಂದಗಳಿಗೆ ಮುಖ್ಯಸ್ಥರಾಗಿದ್ದು, ಸತ್ಯಂನ ಉನ್ನತ ಹುದ್ದೆಯಲ್ಲೂ ಅವರ ಹೆಸರು ಕೇಳಿ ಬರುತ್ತಿದೆ. |