ನವದೆಹಲಿ: ಜಾಗತಿಕ ಆರ್ಥಿಕ ಕುಸಿತ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್ ಇದೀಗ ಮತ್ತೆ ಹಲವು ಉದ್ಯೋಗಿಗಳಿಗೆ ಕತ್ತರಿ ಪ್ರಯೋಗ ಮಾಡಲು ನಿರ್ಧರಿಸಿದೆ. ಹೆಚ್ಚುತ್ತಿರುವ ಖರ್ಚನ್ನು ಸಹಜ ಸ್ಥಿತಿಯತ್ತ ತರಲು ಹಾಗೂ ಸಂಸ್ಥೆಯ ಪುನರುಜ್ಜೀವನ ಮಾಡಲು ಹೊರಟಿರುವ ಜೆಟ್ ಏರ್ವೇಸ್ನ ಹೊಸ ನಿರ್ಧಾರದಿಂದ ಸುಮಾರು 400ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.ಮೂಲಗಳ ಪ್ರಕಾರ ಜೆಟ್ ಕೆಲವು ಪ್ರಮುಖ ನಗರಗಳಲ್ಲಿರುವ ತನ್ನ ಶಾಖೆಗಳನ್ನು ಮುಚ್ಚಲು ಯೋಚಿಸಿದ್ದು, ತನ್ನ ಮುಖ್ಯ ಕಚೇರಿಯಾದ ಮುಂಬೈಯಿಂದಲೇ ಉಳಿದ ನಗರಗಳಿಗೆ ನಿರ್ದೇಶನ ನೀಡುವಂತಹ ಕ್ರಮ ಆರಂಭಿಸಲಿದೆ ಎಂದೂ ಹೇಳಲಾಗುತ್ತಿದೆ. ಇದರಿಂದಾಗಿ ಉಳಿದ ಶಾಖೆಗಳಿಗೆ ವಿನಿಯೋಗಿಸುವ ಖರ್ಚು ಹಾಗೂ ಆ ಶಾಖೆಗಳ ಉದ್ಯೋಗಿಗಳಿಗೆ ನೀಡುವ ವೇತನ ಉಳಿತಾಯವಾಗುತ್ತದೆ ಎಂಬುದು ಜೆಟ್ ಲೆಕ್ಕಾಚಾರ. ಆದರೆ ಇದರಿಂದ 400ಕ್ಕೂ ಅಧಿಕ ಮಂದಿ ಮಾತ್ರ ಉದ್ಯೋಗ ಕಳೆದುಕೊಳ್ಳುವುದು ನಿಶ್ಚಿತ.ಜೆಟ್- ಕಿಂಗ್ ಫಿಷರ್ ಒಪ್ಪಂದ?ಇದಲ್ಲದೆ, ಜೆಟ್ ಏರ್ವೇಸ್ ಈಗಾಗಲೇ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಜತೆಗೆ ಒಪ್ಪಂದ ನಡೆಸಲಿದೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಕಿಂಗ್ಫಿಷರ್ ಏರ್ಲೈನ್ಸ್ ಹಾಗೂ ಜೆಟ್ ಏರ್ವೇಸ್ ನಡುವೆ ಮಾತುಕತೆ ನಡೆದಿದೆ. ಎರಡೂ ಸಂಸ್ಥೆಗಳ ಸಂಪನ್ಮೂಲಗಳನ್ನು ಜೆಟ್ ಹಾಗೂ ಕಿಂಗ್ ಫಿಷರ್ ಬಳಸಬಹುದು ಎಂಬ ಒಪ್ಪಂದಕ್ಕೆ ಬರಲಾಗುತ್ತಿದ್ದು, ಇದರಿಂದ ಖರ್ಚು ಕಡಿಮೆಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಜೆಟ್ ಏರ್ವೇಸ್ ಕೆಲವು ನಗರಗಳಲ್ಲಿರುವ ತನ್ನ ಟಿಕೆಟ್ ನೀಡುವ ಶಾಖೆಗಳನ್ನು ಮುಚ್ಚುವ ಸಂಭವವಿದೆ. ಸದ್ಯ ಜಾಗತಿಕ ಆರ್ಥಿಕ ದುಸ್ತರವಿರುವುದರಿಂದ ಏರ್ಲೈನ್ಸ್ಗಳೆಲ್ಲವೂ ಕಷ್ಟದ ಹಾದಿಯಲ್ಲಿವೆ. ಭಾರತ ಹಾಗೂ ಇತರ ದೇಶಗಳಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಖರ್ಚು ಕಡಿಮೆ ಮಾಡುವ ದಾರಿಗಳನ್ನು ಹುಡುಕಿಕೊಳ್ಳಲೇ ಬೇಕಾಗಿದೆ. ವಿವಿಧ ಏರ್ಲೈನ್ಸ್ಗಳು ತಮ್ಮ ಪ್ರಯಾಣದರದಲ್ಲಿ ಕಡಿತ ತೋರಿಸಿ ಗ್ರಾಹಕರನ್ನು ಕರ್ಷಿಸಲು ಯತ್ನಿಸಿದರೂ ಈ ತಂತ್ರ ಅಷ್ಟು ಫಲಕಾರಿಯಾಗಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. |