ನವದೆಹಲಿ: ಸತ್ಯಂ ಸಂಸ್ಥಾಪಕ ಅಧ್ಯಕ್ಷ ರಾಮಲಿಂಗರಾಜು ಎಸಗಿದ ಭಾರೀ ಹಗರಣದಲ್ಲಿ ಸತ್ಯಂ ಕಂಪ್ಯೂಟರ್ಸ್ನ ಸ್ವತಂತ್ರ ನಿರ್ದೇಶಕರು ಭಾಗಿಯಾಗಿಲ್ಲ ಎಂದು ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಶನ್ ಆಫೀಸ್ (ಎಸ್ಎಫ್ಐಒ) ದೃಢಪಡಿಸಿದೆ.
ಮೂರು ತಿಂಗಳ ಕಾಲ ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾದ 14 ಸಾವಿರ ಪುಟಗಳ ವರದಿಯಲ್ಲಿ ಸತ್ಯಂನ ನಾಲ್ಕು ಸ್ವತಂತ್ರ ನಿರ್ದೇಶಕರನ್ನೂ ತನಿಖೆಗೆ ಒಳಪಡಿಸಿದ್ದು, ಅವರು ಯಾವುದೇ ಹಗರಣದಲ್ಲಿ ಪಾಲ್ಗೊಂಡಿಲ್ಲ ಎಂದು ವರದಿ ಮಾಡಿದೆ. ನಿರ್ದೇಶಕರಾದ ವಿನೋದ್ ಧಾಮ್, ಮಂಗ್ಲಂ ಶ್ರೀನಿವಾಸನ್, ಕೆ.ಜಿ.ಪಲೆಪು ಹಾಗೂ ಟಿ.ಆರ್.ಪ್ರಸಾದ್ ಅವರ್ಯಾರಿಗೂ ಈ ಹಗರಣದ ಅರಿವಿರಲಿಲ್ಲ. ಸತ್ಯಂನ ಲೆಕ್ಕಪತ್ರಗಳ ಬಗ್ಗೆ ಮಾಹಿತಿಯಿದ್ದುದು ರಾಜು ಸಹೋದರರಿಗೆ ಬಿಟ್ಟರೆ ಉಳಿದ ಉನ್ನತ ಹುದ್ದೆಯಲ್ಲಿದ್ದವರಿಗೆ ಮಾತ್ರ ಎಂದಿದೆ. ಸತ್ಯಂನ 7,800 ಕೋಟಿ ರೂಪಾಯಿಗಳ ಹಗರಣ ಬಯಲಾಗುತ್ತಿದ್ದಂತೆ ಸರ್ಕಾರ ತನಿಖೆಗಾಗಿ ಜ.11ರಂದು ಎಸ್ಎಫ್ಒ ನೇಮಿಸಿತ್ತು. |