ನವದೆಹಲಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಲು ಸಮಾರಂಭದಲ್ಲಿ ಗೈರುಹಾಜರಾಗಿದ್ದು ಅವರಿಬ್ಬರ ಬ್ರ್ಯಾಂಡ್ ಇಮೇಜ್ಗೆ ಧಕ್ಕೆ ತರಲಿದೆಯೇ?ಹೌದು ಎನ್ನುತ್ತಾರೆ ಹಲವು ಉದ್ಯಮಿಗಳು. ಜಾಹಿರಾತು ಹಾಗೂ ಮಾಧ್ಯಮ ವಲಯದ ತಜ್ಞರ ಪ್ರಕಾರ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಲು ಹೋಗದೆ ಇದ್ದುದು ಅವರಿಬ್ಬರ ವರ್ಚಸ್ಸಿಗೆ ಅಡ್ಡ ಪರಿಣಾಮ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಹರ್ಭಜನ್ ಸಿಂಗ್ ಮೇಲೆ ಇದು ಹೆಚ್ಚಿನ ಪರಿಣಾಮ ಬೀರದಿದ್ದರೂ, ನಾಯಕ ಸ್ಥಾನದಲ್ಲಿರುವ ಧೋನಿ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದೂ ಹೇಳುತ್ತಾರೆ.ಧೋನಿ ಜಾಹಿರಾತು ವಲಯದಲ್ಲಿನ ಹಾಟ್ ಪ್ರಾಪರ್ಟಿ. ಅವರು 31 ಸಂಸ್ಥೆಗಳ ಜಾಹಿರಾತುಗಳಿಗೆ ಸದ್ಯ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಪೆಪ್ಸಿ, ಏರ್ಸೆಲ್, ಹನಿ, ಎಕ್ಸೈಡ್, ಟಿವಿಎಶ್ ಮೋಟಾರ್ಸ್, ಬ್ರಿಲ್ ಕ್ರೀಂ ಹೇರ್ಜೆಲ್ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಅವರ ಜಾಹಿರಾತು ಸಂಬಂಧವಿದೆ. ಒಂದು ಅಂದಾಜಿನ ಪ್ರಕಾರ ಧೋನಿ ಅವರಿಗೆ ವರ್ಷಕ್ಕೆ ಒಂದು ಜಾಹಿರಾತಿಗೆ ಒಂದರಿಂದ 2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಹೀಗಾಗಿ ಇಂತಹ ಬ್ರ್ಯಾಂಡ್ ಇಮೇಜನ್ನು ಹಾಗೆಯೇ ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಅವರಲ್ಲಿದೆ. ಆದರೆ, ಸಭೆಗೆ ಹಾಜರಾಗದೆ ಅಗೌರವ ತೋರಿಸಿದ್ದು, ಅವರ ಬ್ರ್ಯಾಂಡ್ ಇಮೇಜ್ಗೆ ಕ್ಪಪು ಚುಕ್ಕಿಯಿಟ್ಟಂತೆ ಕಾಣುತ್ತದೆ ಎಂದೂ ಮಾರುಕಟ್ಟೆ ವಲಯದ ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಧೋನಿಗೆ ಹೋಲಿಸಿದರೆ ಹರ್ಭಜನ್ ಅವರಿಗೆ ಅಂತಹ ಬ್ರ್ಯಾಂಡ್ ಇಮೇಜ್ ಇಲ್ಲ. ಅವರು ಎರಡು ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಧೋನಿಯ ಮೇಲೆ ಬೀರುವ ಪರಿಣಾಮ ಹೆಚ್ಚು ಎಂದೂ ಹಲವರು ಅಭಿಪ್ರಾಯಪಡುತ್ತಾರೆ.ಇನ್ನೂ ಕೆಲವು ಉದ್ಯಮ ಪತಿಗಳ ಪ್ರಕಾರ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲು ಹೋಗಿಲ್ಲ ಅನ್ನುವುದು ಅವರ ಬ್ರ್ಯಾಂಡ್ ಇಮೇಜಿಗೆ ಕಪ್ಪುಚುಕ್ಕೆಯಂತೆ ಅಲ್ಲ ಎಂದೂ ಹೇಳುತ್ತಾರೆ. ಧೋನಿ, ಹರ್ಭಜನ್ ಅವರು ಮೈದಾನದಲ್ಲಿ ಯಾವ ಪ್ರಭುದ್ಧತೆಯನ್ನು ತೋರಿಸುತ್ತಾರೆಯೋ, ಅದರಲ್ಲಿ ಅವರ ಬ್ರ್ಯಾಂಡ್ ಇಮೇಜ್ ನಿಂತಿದೆ ಎಂದೂ ವಾದಿಸುತ್ತಾರೆ.ಆದರೂ, ಉನ್ನತ ಪ್ರಶಸ್ತಿಯೊಂದನ್ನು ಸ್ವೀಕರಿಸಲು ಹೋಗದೆ ಇದ್ದುದು ಅಶಿಸ್ತಿನ ಪರಮಾವಧಿ ಎಂದೇ ಕೆಲವರು ಬಣ್ಣಿಸಿದರೆ, ಇನ್ನೂ ಕೆಲವರು ಇದು ದೇಶದ ಅತ್ಯುನ್ನತ ಪ್ರಶಸ್ತಿಗೆ ತೋರಿದ ಅಗೌರವ ಎಂದೂ ಹಲವರು ವಿಶ್ಲೇಶಿಸಿದ್ದಾರೆ. ಏ.14ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಸ್ವೀಕರಿಸಲು ಹೋಗಿರಲಿಲ್ಲ. ಇದೇ ಸಂದರ್ಭ ಅವರು ಜಾಹಿರಾತು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು ಎಂಬ ಟೀಕೆಯೂ ವ್ಯಕ್ತವಾಗಿತ್ತು. |