ದೇಶದ ಬೃಹತ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಫ್ಟ್ವೇರ್ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ದರ ಸಮರದಿಂದಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವತ್ತ ಗಮನಹರಿಸುವುದು ಅಗತ್ಯವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಗ್ರಾಹಕರು ಕಡಿಮೆ ದರದಲ್ಲಿ ಸೇವೆಯನ್ನು ಪೂರೈಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದಲ್ಲಿ ಲಾಭಾಂಶದಲ್ಲಿ ಹೆಚ್ಚಳವಾಗಿದ್ದರೂ ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಮದೊರೈ ಹೇಳಿದ್ದಾರೆ. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್ ತ್ರೈಮಾಸಿಕ ಲಾಭಾಂಶದಲ್ಲಿ ಶೇ.4.6 ರಷ್ಟು ಹೆಚ್ಚಳವಾಗಿದ್ದರೂ ಮುಂಬರುವ ವರ್ಷದಲ್ಲಿ ಸೇವಾದರ ಏಕಂಕಿಗೆ ತಲುಪುವ ಸಾಧ್ಯತೆಗಳಿವೆ. ಲಾಭಾಂಶದಲ್ಲಿ ಹೆಚ್ಚಳವಾಗಬಹುದು ಆದರೆ ಅದು ಅಲ್ಪ ಪ್ರಮಾಣದಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ದರ ಸಮರದ ಮಧ್ಯೆಯು ಕಂಪೆನಿ ಇತರ ಕಂಪೆನಿಗಳೊಂದಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ವಹಿವಾಟು ಕುಸಿತಗೊಳ್ಳುತ್ತಿದ್ದರೂ ಆಂತರಿಕ ವಿಧಾನಗಳಿಂದ ಎದುರಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ರಾಮ್ದೊರೈ ಹೇಳಿದ್ದಾರೆ. |