ಏಪ್ರಿಲ್ 11ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಅಲ್ಪ ಏರಿಕೆ ಕಂಡು ಶೇ.0.26 ತಲುಪಿತು. ಆಹಾರ ಧಾನ್ಯಗಳು, ಮೊಟ್ಟೆ, ಉಪ್ಪು, ಮತ್ತು ಹಣ್ಣು-ತರಕಾರಿಗಳಂತಹ ಅಗತ್ಯ ವಸ್ತುಗಳ ಬೆಲೆಗಳು ಮಾತ್ರ ಏರುತ್ತಲೇ ಇರುವುದು ಜನಸಾಮಾನ್ಯರು ಈ ಹಣದುಬ್ಬರದ ಅಂಕಿ ಅಂಶದ ಬಗ್ಗೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ.
ಸಗಟು ಬೆಲೆ ಆಧಾರಿತ ಹಣದುಬ್ಬರವು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.7.95 ಇತ್ತು. ಅಂದು ಆವಶ್ಯಕ ವಸ್ತುಗಳ ಬೆಲೆಗಳು ಇಂದಿಗಿಂತ ಕಡಿಮೆ ಇದ್ದುದು ವಿಪರ್ಯಾಸ. ಮತ್ತು ಹಣದುಬ್ಬರ ಪ್ರಮಾಣ ಘೋಷಣೆಯ ಹಿಂದೆ ಓಟಿನ ವಾಸನೆ ಇದೆ ಎಂಬ ಬಗ್ಗೆ ಜನತೆಗೆ ಶಂಕೆ ಮೂಡುವಂತೆ ಮಾಡಿದೆ.
ವಾರ್ಷಿಕ ಸಾಲ ನೀತಿ ಪ್ರಕಟಿಸಿರುವ ರಿಸರ್ವ್ ಬ್ಯಾಂಕು, ಬಡ್ಡಿದರಗಳ ಕಡಿತ ಘೋಷಿಸಿದ್ದು, 3 ದಶಕಗಳಷ್ಟು ಕಡಿಮೆ ಮಟ್ಟದಲ್ಲಿರುವ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.
ಆರ್ಬಿಐ ರೆಪೋ (ಸಾಲ) ಮತ್ತು ರಿವರ್ಸ್ ರೆಪೋ (ಖರೀದಿ) ದರಗಳನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಇಳಿಸಿ ಅನುಕ್ರಮವಾಗಿ ಶೇ.4.75 ಮತ್ತು ಶೇ.3.25ಕ್ಕೆ ನಿಗದಿಪಡಿಸಿತ್ತು.
ಉಲ್ಲೇಖಿತ ವಾರದಲ್ಲಿ, ಕಚ್ಚಾ ಆಹಾರದ ಬೆಲೆಯು ಶೇ.0.5ರಷ್ಟು ಏರಿಕೆ ಕಂಡಿದೆ. ಚಹಾ ಬೆಲೆ ಶೇ.5, ಸಜ್ಜೆಯ ಬೆಲೆ ಶೇ.3, ಹಣ್ಣು ಮತ್ತು ತರಕಾರಿಗಳ ಬೆಲೆ ಶೇ.2ರಷ್ಟು ಹಾಗೂ ಮಟನ್ ಮತ್ತು ಜೋಳದ ಬೆಲೆಗಳು ಶೇ.1ರಷ್ಟು ಏರಿಕೆ ಕಂಡಿದ್ದವು. |