15ನೇ ಲೋಕಸಭೆಯ ತಲಾಶ್ ಮೇ 16ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಆ ಅಂತ್ಯವೇ ದೇಶದ ಹಣಕಾಸು ಚಟುವಟಿಕೆಯನ್ನು ಚೇತರಿಕೆಯ ಹಾದಿಯತ್ತ ಕೊಂಡೊಯ್ಯಲಿದೆ ಎಂಬುದು ಈಗ ತಜ್ಞರ ಅಭಿಪ್ರಾಯ.
ಚುನಾವಣೆಯ ನಂತರ ಹಣಕಾಸು ವ್ಯವಹಾರಗಳು ಇದ್ದಕ್ಕಿಂದ್ದಂತೆ ಚುರುಕುಗೊಳ್ಳುವ ಪ್ರಕ್ರಿಯೆಗೆ ಭಾರತದಲ್ಲಿ ಇತಿಹಾಸವೇ ಇದೆ. 1984ರಲ್ಲಿ ಎಂಟನೇ ಲೋಕಸಭೆ ತನ್ನ ಶಕೆ ಆರಂಭಿಸಿದಾಗ ಇದೇ ಅನುಭವ ರಾಷ್ಟ್ರಕ್ಕೆ ಆಗಿತ್ತು. ನಂತರ ಸತತವಾಗಿ 1998, 1999 ಹಾಗೂ 2004ರ ಚುನಾವಣೆ ನಡೆದ ಸಂದರ್ಭವೂ ಇದೇ ಪರಿಣಾಮ ಆಗಿತ್ತು.
ಚುನಾವಣೆಯ ಮೊದಲ ಆರು ತಿಂಗಳ ಹಾಗೂ ನಂತರ ಆರು ತಿಂಗಳ ಉದ್ಯಮದ ಉತ್ಪಾದನಾ ಸೂಚ್ಯಂಕ ಗಮನಿಸಿದರೆ 20-80 ಪಾಯಿಂಟ್ಗಷ್ಟು ಏರಿಕೆ ಕಂಡಿರುವುದು ಬೆಳಕಿಗೆ ಬರುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲೀ, ಬಿಜೆಪಿ ಸರ್ಕಾರದ ಅವಧಿಯಲ್ಲಾಗಲೀ ಬದಲಾಗಿರಲಿಲ್ಲ. ಯಾವುದೇ ಸರ್ಕಾರದ ಆಡಳಿತವಿದ್ದರೂ ಹಣಕಾಸು ಚಟುವಟಿಕೆ ಚುರುಕುಗೊಂಡಿರುವುದು ಇಲ್ಲಿ ಕಾಣುತ್ತದೆ ಎಂಬುದು ತಜ್ಞರ ಲೆಕ್ಕಾಚಾರ.
ಬಿಜೆಪಿಯ ಎನ್ಡಿಎ 2004ರಲ್ಲಿ ಸೋಲನ್ನು ಒಪ್ಪಿಕೊಂಡಾಗ ಕಾಂಗ್ರೆಸ್ನ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಚುನಾವಣಎ ನಡೆದ ಆರೇ ತಿಂಗಳಲ್ಲಿ ಮಾರುಕಟ್ಟೆ ಶೇ.0.8ರಷ್ಟು ಏರಿಕೆ ಕಂಡಿತ್ತು. ಇದಕ್ಕೂ ಮೊದಲು ಕಾರ್ಗಿಲ್ ಕದನ ನಡೆದ ಬಳಿಕ ಅಕ್ಟೋಬರ್ 1999ರ ಚುನಾವಣೆಯ ನಂತರವೂ ಇದೇ ಅನುಭವ ರಾಷ್ಟ್ರದ ಮಾರುಕಟ್ಟೆಯಲ್ಲಿ ಆಗಿತ್ತು. ಇಂತಹ ಐದು ಉದಾಹರಣೆಗಳು ಲಭ್ಯವಿದ್ದರೂ, 1989 ಹಾಗೂ 1996ರ ಚುನಾವಣೆಯ ಆರು ತಿಂಗಳ ನಂತರ ಮಾತ್ರ ಹಣಕಾಸು ಚಟುವಟಿಕೆ ಬಿಗಡಾಯಿಸಿ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿತ್ತು.
ಹಾಗಾಗಿ ಈ ಬಾರಿಯ 2009ರ ಚುನಾವಣೆ ಬಹುಮುಖ್ಯ ಎನಿಸುತ್ತದೆ. ಸರ್ಕಾರ ಎಷ್ಟು ಕಾಲ ಬಾಳುತ್ತದೆ ಎಂಬ ಭಯವಿದ್ದರೂ ಸರ್ಕಾರ ಉತ್ತಮ ಹಣಕಾಸು ಯೋಜನೆಗಳನ್ನು ಪ್ರಕಟಿಸಿದರೆ ಅದರಿಂದ ಹಣಕಾಸು ವ್ಯವಹಾರ ಕುಸಿತವಾಗುವುದನ್ನು ಕೊಂಚ ತಪ್ಪಿಸಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು. ಈಗಾಗಲೇ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಿ ಹೇಳುವುದಾದರೆ, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಲ್ಲಿ 58,000 ಕೋಟಿ ರೂಪಾಯಿಗಳ ವಿವಿಧ ಹಣಕಾಸು ಯೋಜನೆಗಳು, ಹಾಗೂ ಕಾಂಗ್ರೆಸ್ ಸರ್ಕಾರ ಬಂದಲ್ಲಿ 23,000 ಕೋಟಿ ರೂಪಾಯಿಗಳ ಹಣಕಾಸು ಯೋಜನೆಗಳು ಚಾಲನೆಗೆ ಬರಲಿದೆ. |