ಕೇಂದ್ರ ಸರಕಾರ ಬಿಡುಗಡೆಗೊಳಿಸಲಾದ ಉತ್ತೇಜನ ಪ್ಯಾಕೇಜ್ಗಳು ಆರ್ಥಿಕತೆಯ ಪರಿಣಾಮ ಏಪ್ರಿಲ್-ಮೇ ತಿಂಗಳಿನಿಂದ ಆರಂಭವಾಗಲಿದ್ದು ಅಕ್ಟೋಬರ್ ತಿಂಗಳವರೆಗೆ ಸಂಪೂರ್ಣ ಸುಸ್ಥಿತಿಗೆ ಬರಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ. ಉತ್ತೇಜನ ಪ್ಯಾಕೇಜ್ಗಳಿಂದಾಗಿ ಮೇ ತಿಂಗಳಿನಿಂದ ಆರ್ಥಿಕತೆ ಸುಸ್ಥಿತಿಯತ್ತ ಸಾಗಲು ಆರಂಭಿಸಲಿದ್ದು, ಅಕ್ಟೋಬರ್ ನಂತರ ಸಂಪೂರ್ಣವಾಗಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಮೊಂಟೆಕ್ ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಆರ್ಥಿಕ ಕುಸಿತದಿಂದ ದೇಶದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ ಕೇಂದ್ರ ಸರಕಾರ ಡಿಸೆಂಬರ್ 7 ರಂದು ಹಾಗೂ ಜನೆವರಿ ಮತ್ತು ಫೆಬ್ರವರಿಯಲ್ಲಿ ಉತ್ತೇಜನ ಪ್ಯಾಕೇಜ್ಗಳನ್ನು ಘೋಷಿಸಿತ್ತು. ದೇಶದ ಅಭಿವೃದ್ಧಿ ದರ ಪ್ರಸಕ್ತ ವರ್ಷದಲ್ಲಿ ಶೇ.6ಕ್ಕೆ ತಲುಪುವ ಸಾಧ್ಯತೆಗಳಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಮತ್ತಷ್ಟು ಏರಿಕೆಯಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸಲು ಅವಕಾಶಗಳಿವೆ ಎಂದು ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ. |