ಪರೋಕ್ಷ ತೆರಿಗೆ ಕಡಿತ ಹಾಗೂ ವ್ಯಯಕ್ತಿಕ ಆದಾಯ ತೆರಿಗೆಯಲ್ಲಿ ಇಳಿಕೆ ಮತ್ತು ಮೂಲಸೌಕರ್ಯಗಳ ಕ್ಷೇತ್ರಗಳಲ್ಲಿ ಹೆಚ್ಚುವರಿ ಹೂಡಿಕೆಯಿಂದಾಗಿ ಆರ್ಥಿಕತೆ ಚೇತರಿಕೆಗೆ ಕಾರಣವಾಗುತ್ತದೆ ಎಂದು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀ ಸರಕಾರಕ್ಕೆ ಸಲಹೆ ನೀಡಿದೆ.
ಮತ್ತಷು ಉತ್ತೇಜನ ಪ್ಯಾಕೇಜ್ಗಳು ಹಾಗೂ ಆರ್ಥಿಕ ಸುಧಾರಣಾ ನೀತಿಗಳನ್ನು ಶೀಘ್ರದಲ್ಲಿ ಜಾರಿಗೆ ತಂದು ಕೆಲ ಕ್ಷೇತ್ರಗಳಿಗೆ ತೆರಿಗೆ ವಿನಾಯಿತಿ ನೀಡುವುದು ಅಗತ್ಯವಾಗಿದೆ ಎಂದು ಸಿಐಐನ ರಾಷ್ಟ್ರೀಯ ಅಧ್ಯಕ್ಷ ವೇಣು ಶ್ರೀನಿವಾಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಮಾರುಕಟ್ಟೆ ಮುಂಬರುವ 6-8 ತಿಂಗಳಲ್ಲಿ ಸುಧಾರಣೆ ಕಾಣಲಿದ್ದು, ಈಗಾಗಲೇ ವಾಹನೋದ್ಯಮ ಕ್ಷೇತ್ರದ ಉತ್ಪನ್ನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ದೇಶದ ಕೈಗಾರಿಕೋದ್ಯಮ ಕ್ಷೇತ್ರ ಕಳೆದ ಮಾರ್ಚ್ ತಿಂಗಳಿಂನಿಂದ ಕುಸಿತವನ್ನು ಎದುರಿಸುತ್ತಿರುವುದರಿಂದ ಕೇಂದ್ರ ರಿಸರ್ವ್ ಬ್ಯಾಂಕ್ ಮತ್ತಷ್ಟು ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಆರ್ಥಿಕತೆ ಚೇತರಿಕೆಗಾಗಿ ಘೋಷಿಸಿದ ಎರಡು ಉತ್ತೇಜನ ಪ್ಯಾಕೇಜ್ಗಳನ್ನು ಶ್ಲಾಘಿಸಿದ ಅವರು ಮತ್ತಷ್ಟು ಪ್ಯಾಕೇಜ್ಗಳ ಅಗತ್ಯವಿದೆ ಎಂದು ಹೇಳಿದ್ದಾರೆ. |