ಲೋಕಸಭೆ ಚುನಾವಣಾ ಸಮರ ಮುಕ್ತಾಯ ಕಂಡಿದೆ. ಜೊತೆಗೆ ಜನಾದೇಶದ ಸ್ಪಷ್ಟ ತೀರ್ಪು ಹೊರ ಬಿದ್ದಿದ್ದು, ಯುಪಿಎ ಮತ್ತೊಮ್ಮೆ ಗದ್ದುಗೆ ಏರುವುದು ಸ್ಪಷ್ಟವಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಭರವಸೆ ಕೊಟ್ಟ ಪ್ರಣಾಳಿಕೆಯ ಬೇಡಿಕೆ ಈಡೇರಿಸಬೇಕಾಗಿದೆ. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಯುಪಿಎ 1ಲಕ್ಷ ಕೋಟಿ ರೂ.ಧನಸಹಾಯ ನೀಡಬೇಕಾಗಿದೆ!.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಬಡತನ ರೇಖೆಗಿಂತ ಕೆಳಗಿರುವವರಿಗೆ 3ರೂ.ಗೆ 25ಕೆ.ಜಿ.ಅಕ್ಕಿ ಅಥವಾ ಗೋಧಿ ನೀಡುವ ಭರವಸೆ ನೀಡಿತ್ತು. ಆ ನಿಟ್ಟಿನಲ್ಲಿ ಯುಪಿಎ ಭರವಸೆ ಈಡೇರಿಕೆಗೆ ಮುಂದಿನ 5ವರ್ಷಗಳಲ್ಲಿ ಸುಮಾರು 1ಲಕ್ಷ ಕೋಟಿ ರೂ. ವೆಚ್ಚ ಭರಿಸಬೇಕಾಗಿದೆ.
ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬ ಬಡವನಿಗೂ 3ರೂ.ಗೆ 25ಕೆ.ಜಿ.ಅಕ್ಕಿ ಕೊಡುವುದಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಪ್ರಸ್ತುತ ರಾಜ್ಯ ಸರ್ಕಾರಗಳು ಈಗಾಗಲೇ ಸುಮಾರು 8.13ಕೋಟಿ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಅಲ್ಲದೇ ಇಷ್ಟು ಮಂದಿಗೆ ಪ್ರತಿವರ್ಷ 243.9ಲಕ್ಷ ಟನ್ ಆಹಾರ ಒದಗಿಸಬೇಕಾಗುತ್ತದೆ!.
ಆ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 8.13ಕೋಟಿ ಕುಟುಂಬಗಳಿಗೆ ಇಷ್ಟು ಪ್ರಮಾಣದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆಹಾರ ಒದಗಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಯುಪಿಎ ನಿರ್ಧಾರ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ 1,00,000 ಕೋಟಿ ರೂ.ಗಳಷ್ಟು ಹೊರೆ ಬೀಳಲಿದೆ. ಅಲ್ಲದೇ 1,100ಕ್ವಿಂಟಾಲ್ ಆಹಾರವನ್ನು ಖರೀದಿಸಬೇಕಾಗಿದೆ.
ಆದರೆ 2.43ಕೋಟಿ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿದ್ದು, ಇವರೆಲ್ಲ ಕೇಂದ್ರ ಘೋಷಿಸಿದ ಪ್ರಣಾಳಿಕೆಯಡಿಯಲ್ಲಿ ಬರುತ್ತಾರೆಯೇ ಎಂಬುದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿಲ್ಲ. ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಈ ಕುಟುಂಬಗಳು ಪ್ರಸ್ತುತವಾಗಿ 2ರೂ.ಕೆಜಿ ಗೋಧಿ ಹಾಗೂ 3ರೂ.ಗೆ ಅಕ್ಕಿಯನ್ನು ಪಡೆಯುತ್ತಿದ್ದಾರೆ. |