ಕೇಂದ್ರದಲ್ಲಿ ವಿತ್ತ ಖಾತೆ ಸಚಿವರಾಗಿ ಸುಮಾರು 25 ವರ್ಷಗಳ ನಂತರ ಅಧಿಕಾರ ಸ್ವೀಕರಿಸಿದ ಪ್ರಣಬ್ ಮುಖರ್ಜಿ, ಸೋಮವಾರದಂದು ಕಚೇರಿಗೆ ಆಗಮಿಸಿ ರಾಷ್ಟ್ರೀಯ ಬಜೆಟ್ ಮಂಡನೆಗಾಗಿ ಸಿದ್ದತೆ ಆರಂಭಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿತ್ತ ಖಾತೆ ಸಚಿವರಾಗಿ ಅಧಿಕಾರವಹಿಸಿಕೊಂಡ ಕೂಡಲೇ ಮುಖರ್ಜಿ, ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ಕರೆದು ಸಚಿವಾಲಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಪರಿಶೀಲಿಸಿ ಮುಂದಿನ ಬಜೆಟ್ ಮಂಡನೆಗೆ ಪೂರಕ ಸಿದ್ದತೆ ನಡೆಸುವಂತೆ ಆದೇಶಿಸಿದ್ದಾರೆ ಎಂದು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ವಿತ್ತ ಖಾತೆಯನ್ನು ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣಬ್ ಮುಖರ್ಜಿ, ದೇಶದಲ್ಲಿ ಪ್ರಸ್ತುತ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ಸೂಕ್ತ ಆರ್ಥಿಕ ನೀತಿಗಳ ಬದಲಾವಣೆಯೊಂದಿಗೆ ಶೀಘ್ರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಮೇಲಾದ ಆರ್ಥಿಕ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಆರ್ಥಿಕತೆಯನ್ನು ಸದೃಢವಾಗಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿಯವರ ಸಂಪುಟದಲ್ಲಿ ಪ್ರಣಬ್ ಮುಖರ್ಜಿ ವಿತ್ತ ಖಾತೆಯನ್ನು ಹೊಂದಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಂದರ್ಭದಲ್ಲಿ ಅವರ ಬಳಿಯಿದ್ದ ವಿತ್ತ ಖಾತೆಯನ್ನು ಹೆಚ್ಚುವರಿಯಾಗಿ ಸಚಿವ ಮುಖರ್ಜಿಯವರಿಗೆ ನೀಡಲಾಗಿತ್ತು. |