ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯಲ್ಲಿರುವ ಅಡಳಿತ ವಿಭಾಗ, ಮಾರುಕಟ್ಟೆ ಹಾಗೂ ಮಾನವ ಸಂಪನ್ಮೂಲ ವಿಭಾಗಗಳಲ್ಲಿರುವ ಸುಮಾರು 8 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಸಾಧ್ಯತೆಗಳಿವೆ ಎಂದು ಜೂನ್ 1ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಟೆಕ್ ಮಹೀಂದ್ರಾ ತಿಳಿಸಿದೆ.
ಟೆಕ್ ಮಹೀಂದ್ರಾ ಜೂನ್ 1 ರಂದು ನೂತನವಾಗಿ ಅಧಿಕಾರವಹಿಸಿಕೊಂಡ ನಂತರ ಸತ್ಯಂನಲ್ಲಿರುವ ಸಾಫ್ಟ್ವೇರ್ ಇಂಜಿನಿಯರ್ಗಳನ್ನು ಹೊರತುಪಡಿಸಿ ನಾನ್ ಬಿಲ್ಲಿಂಗ್ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವ ಸಾಧ್ಯತೆಗಳಿವೆ ಎಂದು ಸತ್ಯಂ ಅಧಿಕಾರಿಗಳು ತಿಳಿಸಿದ್ದಾರೆ.
ಸತ್ಯಂ ಸಂಸ್ಥೆಯಲ್ಲಿ 10,000- 12 ,000 ಉದ್ಯೋಗಿಗಳು ಹೆಚ್ಚುವರಿಯಾಗಿದ್ದು, ಅಂತಹ ಉದ್ಯೋಗಿಗಳನ್ನು ವಜಾಗೊಳಿಸುವುದು ಅಥವಾ ನಿರ್ವಹಿಸುವ ಬಗ್ಗೆ ಶೀಘ್ರದಲ್ಲಿ ಅಡಳಿತ ಮಂಡಳಿಯ ತಿರ್ಮಾನ ಹೊರಬೀಳಲಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.ಆದರೆ ಟೆಕ್ ಮಹೀಂದ್ರಾ ಕಂಪೆನಿಯ ವಕ್ತಾರರು ಆದಾರರಹಿತ ವರದಿಗಳು ಎಂದು ತಳ್ಳಿಹಾಕಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಹೆಚ್ಚುವರಿಯಾದ ಉದ್ಯೋಗಿಗಳಿಗೆ ವೇತನದಲ್ಲಿ ಕಡಿತಗೊಳಿಸಿ ಒಂದು ವರ್ಷ ರಜೆ ನೀಡಿ ಉದ್ಯೋಗದ ಹುಡುಕಾಟ ನಡೆಸುವಂತೆ ಆದೇಶಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿನೀತ್ ನಯ್ಯರ್ ಮಾತನಾಡಿ , ಸತ್ಯಂ ಸಂಸ್ಥೆಯಲ್ಲಿ 10 ಸಾವಿರ ಹೆಚ್ಚುವರಿ ಉದ್ಯೋಗಿಗಳಿದ್ದಾರೆ ಎಂದು ಹೇಳಿಕೆ ನೀಡಿರುವುದು ಸತ್ಯಂ ಉದ್ಯೋಗಿಗಳಿಗೆ ಆತಂಕ ಮೂಡಿಸಿದೆ. |