ಎಡಪಕ್ಷಗಳ ಆರ್ಥಿಕ ನೀತಿಗಳಿಂದ ಯುಪಿಎ ಸರಕಾರಕ್ಕೆ ಮುಕ್ತಿ ದೊರೆತಂತೆ ಕಾಣುತ್ತಿಲ್ಲ. ಈದೀಗ ಯುಪಿಎ ಪಾಲುದಾರ ಪಕ್ಷವಾದ ತೃಣಮೂಲ ಕಾಂಗ್ರೆಸ್ ಸಾರ್ವಜನಿಕ ಕ್ಷೇತ್ರ, ವಿಮಾ ಕ್ಷೇತ್ರ ಮತ್ತು ರಿಟೇಲ್ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸುತ್ತಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಪಾರ್ಥಾ ಚಟರ್ಜಿಯವರು ಮಾತನಾಡಿ, ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳ ಮಾರಾಟ, ರಿಟೇಲ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತಂತೆ ಸರಕಾರದ ನೀತಿಗಳನ್ನು ವಿರೋಧಿಸಲಾಗುವುದು ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಯುಪಿಎ ಸರಕಾರದ ಭಾರಿ ಕೈಗಾರಿಕೋದ್ಯಮ ಸಚಿವಾಲಯ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳಾದ ಡಿಪಿಎಸ್ಸಿ, ಟೈಡ್ ವಾಟರ್ ಆಯಿಲ್ (ಇಂಡಿಯಾ) ಮತ್ತು ಫೋನಿಕ್ಸ್ ಕಂಪೆನಿಗಳ ಶೇರುಗಳನ್ನು ಮಾರಾಟ ಮಾಡಿತ್ತು. ಆದರೆ ಅದನ್ನು ಪ್ರಸ್ತುತ ಅವಧಿಯಲ್ಲಿ ಮುಂದುವರಿಸಲು ಬಿಡುವುದಿಲ್ಲ .ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಚಟರ್ಜಿ ತಿಳಿಸಿದ್ದಾರೆ.
ಕೇಂದ್ರದಲ್ಲಿರುವ ಅಧಿಕಾರರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳಾದ ಬ್ಯಾಂಕಿಂಗ್, ಪೆನ್ಶೆನ್ , ವಿಮೆ ಕ್ಷೇತ್ರಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದು ಪಾಲುದಾರ ಪಕ್ಷ ತೃಣಮೂಲ ಕಾಂಗ್ರೆಸ್ಗೆ ನುಂಗಲಾಗದ ತುತ್ತಾಗಿದೆ.
ಕೇಂದ್ರದಲ್ಲಿರುವ ಯುಪಿಎ ಸರಕಾರ ಮೂಲಭೂತ ಸೌಕರ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹಿಂದಿನ ಸಭೆಗಳಲ್ಲಿ ಸ್ಪಷ್ಟಪಡಿಸಿದೆ. ಹೂಡಿಕೆ ಹಿಂತೆಗೆತಕ್ಕೆ ಯುಪಿಎ ಮಹತ್ವ ನೀಡುವುದಿಲ್ಲ ಎಂದು ಪಾಲುದಾರ ಪಕ್ಷಗಳಿಗೆ ಮನವರಿಕೆ ಮಾಡಿದೆ ಎಂದು ಚಟರ್ಜಿ ತಿಳಿಸಿದ್ದಾರೆ. |