ಬಹುಕೋಟಿ ಹಗರಣದ ರೂವಾರಿ, ಮಾಹಿತಿ ತಂತ್ರತ್ರಾನ ಕ್ಷೇತ್ರದ ದಿಗ್ಗಜ ಕಂಪೆನಿಯಾದ ಸತ್ಯಂ ಕಂಪ್ಯೂಟರ್ಸ್ನ ಸಂಸ್ಥಾಪಕ ಬಿ.ರಾಮಲಿಂಗಾರಾಜು ಹಾಗೂ ಇತರ ಎಂಟು ಮಂದಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಮಲಿಂಗಾರಾಜು ಹಾಗೂ ಸಹೋದರ ರಾಮಾರಾಜು ಮತ್ತು ಇತರ ಆರು ಮಂದಿ ಆರೋಪಿಗಳನ್ನು ನಗರದ ಸ್ಥಳೀಯ ನ್ಯಾಯಾಲಯದ 16ನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಬಂಧನದ ಅವಧಿಯನ್ನು ಜೂನ್ 10 ರವರೆಗೆ ವಿಸ್ತರಿಸಲಾಗಿದೆ.
ಸತ್ಯಂ ಆರೋಪಿಗಳಾದ ಮಾಜಿ ಸಿಎಫ್ಒ ವಾಡ್ಲಮನಿ ಶ್ರೀನಿವಾಸ್ ಪ್ರೈಸ್ ವಾಟರ್ಹೌಸ್ನ ಇಬ್ಬರು ಲೆಕ್ಕ ಪರಿಶೋಧಕರಾದ ಎಸ್.ಗೋಪಾಲ್ ಕೃಷ್ಣನ್ ಮತ್ತು ತಲ್ಲೂರಿ ಶ್ರೀನಿವಾಸ್ ಸೇರಿದಂತೆ ಎಂಟು ಆರೋಪಿಗಳನ್ನು ಚಂಚಲ್ಗುಡಾ ಜೈಲಿನಲ್ಲಿಡಲಾಗಿದೆ.
ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಅವರನ್ನು ಬಹುಕೋಟಿ ವಂಚನೆ ಹಗರಣದ ಹಿನ್ನೆಲೆಯಲ್ಲಿ ಜನೆವರಿ ತಿಂಗಳಲ್ಲಿ ಬಂಧಿಸಿದ ನಂತರ ನಾಲ್ಕನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. |