ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಕ್ಷೇತ್ರಗಳಿಗೆ ಸಾಲ ನೀಡಿಕೆಯಲ್ಲಿ ಹೆಚ್ಚಳ ಹಾಗೂ ಮತ್ತಷ್ಟು ಬಡ್ಡಿ ದರ ಕಡಿತ ಕುರಿತಂತೆ ಚರ್ಚಿಸಲು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಜೂನ್ 10 ರಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಬ್ಯಾಂಕ್ಗಳಿಂದ ಮತ್ತಷ್ಟು ಬಡ್ಡಿ ದರ ಕಡಿತ ವಾಣಿಜ್ಯ ಸಾಲ ಹಾಗೂ ಕೃಷಿ ಸಾಲ ನೀಡಿಕೆಯಲ್ಲಿ ಹೆಚ್ಚಳದ ಬಗ್ಗೆ ಚರ್ಚಿಸುವುದು ಸಭೆಯ ಉದ್ದೇಶವಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಗಳಿಗೆ ಸಾಲ ವಿತರಣೆ, ಶಿಕ್ಷಣ ಹಾಗೂ ಗೃಹ ಯೋಜನೆಗಳಿಗೆ ಮಧ್ಯಮ ಮತ್ತು ದೀರ್ಘಾವಧಿ ಸಾಲ ನೀಡಿಕೆಯಲ್ಲಿ ಏರಿಕೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಕೈಗಾರಿಕೋದ್ಯಮ ಹಾಗೂ ವಹಿವಾಟು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಸಾಲನೀಡಿಕೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಕಳವಳ ಮೂಡಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಮುಖರ್ಜಿ ತಿಳಿಸಿದ್ದಾರೆ.
ಮೊದಲ ಹೆಜ್ಜೆಯಾಗಿ ಬ್ಯಾಂಕ್ಗಳು ಉದಾರ ನೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಮನವೊಲಿಸಲು ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಸಚಿವ ಮುಖರ್ಜಿ ಹೇಳಿದ್ದಾರೆ. |