ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್ನ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಹುನ್ನಾರ ನಡೆಸುತ್ತಿರುವ ಟೆಕ್ ಮಹೀಂದ್ರಾ ಕ್ರಮವನ್ನು ಸರಕಾರ ಕಣ್ಣುಮುಚ್ಚಿ ನೋಡಿಕೊಂಡಿರಲು ಸಾಧ್ಯವಿಲ್ಲ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಸತ್ಯಂ ಸಂಸ್ಥೆಯನ್ನು ಟೆಕ್ ಮಹೀಂದ್ರಾ ಕಂಪೆನಿ ಖರೀದಿಸಿದ್ದರೂ ಕಂಪೆನಿಯ ವ್ಯವಹಾರಗಳಲ್ಲಿ ಸರಕಾರ ಸಂಪೂರ್ಣ ಭಾಗಿಯಾಗಲಿದೆ ಎಂದು ಸಚಿವ ಖುರ್ಷಿದ್ ತಿಳಿಸಿದ್ದಾರೆ.
ಕಂಪೆನಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಸರಕಾರಕ್ಕೆ ಅಧಿಕಾರವಿದ್ದು, ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ವಿರೋಧವಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಸ್ಪಷ್ಟಪಡಿಸಿದ್ದಾರೆ.
ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ನಯ್ಯರ್ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಕುರಿತಂತೆ ನೀಡಿದ ಹೇಳಿಕೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಸತ್ಯಂ ಸೂಕ್ತ ಹಂತದವರೆಗೆ ಬರುವವರೆಗೆ ಸರಕಾರದ ಸಲಹೆ ಹಾಗೂ ನಿಲುವುಗಳನ್ನು ಸತ್ಯಂ ಪಾಲಿಸಬೇಕಾಗಿದ್ದು, ಉದ್ಯೋಗಿಗಳನ್ನು ವಜಾಗೊಳಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಾರ್ಕೆಟಿಂಗ್ , ಮಾನವ ಸಂಪನ್ಮೂಲ ಮತ್ತು ಅಡಳಿತಾತ್ಮಕ ವಿಭಾಗಗಳಲ್ಲಿರುವ ಸುಮಾರು 8 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಸತ್ಯಂ ಸಿದ್ದತೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ . |