ವೇತನ ಹೆಚ್ಚಳ ಹಾಗೂ ವೈದ್ಯಕೀಯ ಸೌಲಭ್ಯಗಳಿಗಾಗಿ ಆಗ್ರಹಿಸಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ 300 ಗುತ್ತಿಗೆ ನೌಕರರು ಕೆಲಸವನ್ನು ಬಹಿಷ್ಕರಿಸಿ ಇಂದಿರಾಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಮುಷ್ಕರ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ತೀರಾ ಕಡಿಮೆ ವೇತನ ನೀಡುತ್ತಿದ್ದು, ಖಾಸಗಿ ಕಂಪೆನಿಗಳಲ್ಲಿ ಕಡಿಮೆ ಹುದ್ದೆಯ ಸಿಬ್ಬಂದಿಗಳಿಗೆ ನೀಡುವ ಆರೋಗ್ಯ ವಿಮೆ ,ಭವಿಷ್ಯ ನಿಧಿಯಂತಹ ಸೌಲಭ್ಯಗಳನ್ನು, ಏರ್ ಇಂಡಿಯಾದಂತಹ ಪ್ರತಿಷ್ಠಿತ ವಿಮಾನ ಸಂಸ್ಥೆ ತಳ್ಳಿಹಾಕುತ್ತಿದೆ ಎಂದು ಉದ್ಯೋಗಿಗಳ ಸಂಘದ ಅಧ್ಯಕ್ಷ ಜಿತ್ ಸಿಂಗ್ ಆರೋಪಿಸಿದ್ದಾರೆ.
ಅಮೃತ್ಸರ್, ಜೈಪುರ್ ದೇಶದ ಮತ್ತಿತರ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ನೌಕರರು ಮುಷ್ಕರ ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಏರ್ ಇಂಡಿಯಾ ಅಡಳಿತ ಮಂಡಳಿ ಗುತ್ತಿಗೆ ನೌಕರರ ಮುಷ್ಕರದಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.
ಮುಷ್ಕರ ನಿರತ ನೌಕರರೊಂದಿಗೆ ಏರ್ ಇಂಡಿಯಾ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದು, ಪ್ರತಿಭಟನಾಕಾರರ ಬೇಡಿಕೆಗಳನ್ನು ಕೂಡಲೇ ಈಡೇರಿಸಲಾಗುವುದು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಮುಷ್ಕರ ನಿರತ ಗುತ್ತಿಗೆ ಆಧಾರಿತ ನೌಕರರನ್ನು ಕೆಲಸದಿಂದ ವಜಾಗೊಳಿಸುವುದು ಸೇರಿದಂತೆ ಗುತ್ತಿಗೆಯನ್ನು ರದ್ದುಪಡಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. |