ಕೇಂದ್ರದ ಯುಪಿಎ ಸರಕಾರ ಮುಂದಿನ ಐದು ವರ್ಷಗಳ ಅವಧಿಯಲ್ಲಿ 1 ಕೋಟಿ ಹುದ್ದೆಗಳನ್ನು ಸೃಷ್ಟಿಸಲಿದ್ದು, 1.55 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ನೂತನವಾಗಿ ಅಧಿಕಾರ ಸ್ವೀಕರಿಸಿದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಹೇಳಿದ್ದಾರೆ.
ಮಾರನ್ ಹಿಂದಿನ ಸರಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಡಿಎಂಕೆಯ ಒಳಜಗಳದಿಂದಾಗಿ ಅವಧಿ ಪೂರ್ಣಗೊಳ್ಳುವ ಮುನ್ನ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆದರೆ ಪ್ರಸಕ್ತ ಸರಕಾರದಲ್ಲಿ ಐದು ವರ್ಷಗಳ ಅವಧಿಯವರೆಗೆ ಸಚಿವರಾಗಿರುವುದಾಗಿ ತಿಳಿಸಿದ್ದಾರೆ .
ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು ನನ್ನ ಉದ್ದೇಶವಾಗಿದೆ . ಈ ಬಾರಿ ಐದು ವರ್ಷಗಳ ಅಧಿಕಾರವಧಿಯನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಮಾರನ್ ಹೇಳಿದ್ದಾರೆ .
ವಾರ್ಷಿಕವಾಗಿ 52 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಜವಳಿ ಕ್ಷೇತ್ರವನ್ನು ಪ್ರಸಕ್ತ ವರ್ಷಾಂತ್ಯಕ್ಕೆ ಶೇ.8 ರಿಂದ ಶೇ.10 ರಷ್ಟು ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ನುಡಿದರು .
ಕೃಷಿ ಕ್ಷೇತ್ರದ ನಂತರ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಜವಳಿ ಕ್ಷೇತ್ರ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಫ್ತುವಹಿವಾಟಿನಲ್ಲಿ ಕುಸಿತ ಕಂಡಿದೆ ಎಂದು ಮಾರನ್ ತಿಳಿಸಿದ್ದಾರೆ. |