ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ಕುಸಿಯುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಸರಕಾರ ಆರ್ಥಿಕ ಪೀಡಿತ ಕ್ಷೇತ್ರಗಳಾದ ಮೂಲಸೌಕರ್ಯ ,ರಫ್ತು ,ವಿಶೇಷ ಆರ್ಥಿಕ ವಲಯಗಳು ಮತ್ತು ಗೃಹನಿರ್ಮಾಣದತ್ತ ಹೆಚ್ಚಿನ ಗಮನಹರಿಸಲಿವೆ ಎಂದು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಜಂಟಿ ಅದಿವೇಶನದಲ್ಲಿ ಯುಪಿಎ ಸರಕಾರದ ಕಾರ್ಯಸೂಚಿಯನ್ನು ಮಂಡಿಸಿದ ಪ್ರತಿಭಾ ಪಾಟೀಲ್ ,ನೂತನ ಸರಕಾರದಿಂದ ಸರಕಾರಿ ಸ್ವಾಮ್ಯದ ಕಂಪೆನಿಗಳ ಏಳಿಗೆ ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ ಮರಳಿ ಸ್ವದೇಶಕ್ಕೆ ತರಲು ಇತರ ರಾಷ್ಟ್ರಗಳೊಂದಿಗೆ ಸಹಕಾರ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಮರು ಬಂಡವಾಳ ಹೂಡಿಕೆಯಂತಹ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ನಿಧಾನಗತಿಯಲ್ಲಿ ಸಾಗಲಿದೆ ಎನ್ನುವ ನಿರೀಕ್ಷೆಯಿಂದಾಗಿ ಹಣಕಾಸಿನ ವ್ಯವಸ್ಥಾಪನೆಯತ್ತ ಕೂಡಲೇ ಗಮನಹರಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಅಸ್ತಿತ್ವಕ್ಕೆ ಬಂದಿರುವ ನೂತನ ಸರಕಾರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆ , ರಫ್ತು ವಹಿವಾಟು ಜವಳಿ ಕ್ಷೇತ್ರ , ವಾಣಿಜ್ಯ ವಾಹನಗಳು , ಮೂಲಸೌಕರ್ಯ ಮತ್ತು ಗೃಹನಿರ್ಮಾಣದಂತಹ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಲಾದ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆಜಿಗೆ 3 ರೂಪಾಯಿಯಂತೆ 25 ಕೆಜಿ ಅಕ್ಕಿ ಅಥವಾ ಗೋಧಿ ವಿತರಿಸಲು ರಾಷ್ಟ್ರೀಯ ಅಹಾರ ಭಧ್ರತೆ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. |