ಭಾರ್ತಿ ಏರ್ಟೆಲ್ , ದಕ್ಷಿಣ ಆಫ್ರಿಕಾದ ಟೆಲಿಕಾಂ ದೈತ್ಯ ಕಂಪೆನಿ ಎಂಟಿಎನ್ ನಡುವಣ ಉದ್ದೇಶಿತ ಒಪ್ಪಂದದಲ್ಲಿ ಸರಕಾರ ಮದ್ಯಸ್ಥಿಕೆ ವಹಿಸುವುದಿಲ್ಲ. ಆದರೆ ಅಗತ್ಯವಾದಲ್ಲಿ ಕಾನೂನುಬದ್ಧ ಬೆಂಬಲ ನೀಡಲಾಗುವುದು ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಇತರ ಕಂಪೆನಿಗಳ ಒಪ್ಪಂದದ ನಡುವೆ ಸರಕಾರದ ಮಧ್ಯಸ್ಥಿಕೆ ಅಗತ್ಯವಿಲ್ಲ. ಇತರ ಕಂಪೆನಿಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ನಮಗಿಲ್ಲ ಎಂದು ಖುರ್ಷಿದ್ ತಿಳಿಸಿದ್ದಾರೆ.
ಆದರೆ, ಕಂಪೆನಿಗಳಿಗೆ ಕಾರ್ಪೋರೇಟ್ ಕಾನೂನು ಅಥವಾ ಸರಕಾರದ ಸಲಹೆಗಳು ಅಗತ್ಯವಾದಲ್ಲಿ ಸರಕಾರ ಸಹಕಾರ ನೀಡುತ್ತದೆ ಎಂದು ಸಚಿವ ಖುರ್ಷಿದ್ ಫೈನಾನ್ಶಿಯಲ್ ಡೈಲಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರ್ತಿ ಏರ್ಟೆಲ್ ಕಂಪೆನಿಯ ಒಪ್ಪಂದ ಯಶಸ್ವಿಯಾದಲ್ಲಿ ಜಾಗತಿಕ ಮಟ್ಟದಲ್ಲಿ 3ನೇ ವೈರ್ಲೆಸ್ ಕಂಪೆನಿಯ ಸ್ಥಾನಪಡೆದು, 200ಮಿಲಿಯನ್ ಗ್ರಾಹಕರನ್ನು ಹೊಂದಲಿದ್ದು, ವಾರ್ಷಿಕವಾಗಿ 20 ಬಿಲಿಯನ್ ಡಾಲರ್ ವಹಿವಾಟು ನಡೆಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |