ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಿಂದ ಬಡ್ಡಿದರ ಮತ್ತಷ್ಟು ಕಡಿತ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾದ ಕೈಗಾರಿಕೋದ್ಯಮಗಳಿಗೆ ಸಾಲನೀಡಿಕೆಯಲ್ಲಿ ಹೆಚ್ಚಳ ಕುರಿತಂತೆ ಸಲಹೆ ನೀಡಲು ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ಇಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರಕಾರ 565 ಕೋಟಿ ರೂಪಾಯಿಗಳ ಮೊತ್ತದ 23 ನೇರ ವಿದೇಶಿ ಬಂಡವಾಳ ಹೂಡಿಕೆ ಮನವಿಗಳಿಗೆ ಸಮ್ಮತಿ ಸೂಚಿಸಿದ್ದು, ಬಡ್ಡಿ ದರವನ್ನು ಮತ್ತಷ್ಟು ಕಡಿತಗೊಳಿಸುವುದು, ಸಾಲ ವಿತರಣೆಯಲ್ಲಿ ಹೆಚ್ಚಳ ಮತ್ತು ಕೃಷಿ ಸಾಲಕ್ಕೆ ಆದ್ಯತೆ ನೀಡುವಂತೆ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಚರ್ಚಿಸುವುದು ಸಚಿವ ಮುಖರ್ಜಿಯವರ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಭೆಯಲ್ಲಿ ಮೂಲಸೌಕರ್ಯ ಕ್ಷೇತ್ರಕ್ಕೆ ಸಾಲ ನೀಡಿಕೆಗೆ ಆದ್ಯತೆ, ಗೃಹನಿರ್ಮಾಣ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಮಧ್ಯಮ ಅವಧಿಯ ಸಾಲ ವಿತರಣೆಯಲ್ಲಿ ಏರಿಕೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ಬ್ಯಾಂಕ್ಗಳು ಗ್ರಾಹಕರಿಗಾಗಿ ಉದಾರ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದ್ದರು. ಆರ್ಥಿಕ ಕೊರತೆಯಿಂದಾಗಿ ಕೈಗಾರಿಕೋದ್ಯಮ ಹಾಗೂ ವಹಿವಾಟು ಕ್ಷೇತ್ರಗಳು ತೊಂದರೆಯನ್ನು ಅನುಭವಿಸುತ್ತಿದ್ದು, ಸಾಲನೀಡಿಕೆಯಲ್ಲಿನ ವಿಳಂಬ ನೀತಿ ಹಾಗೂ ಹೆಚ್ಚುತ್ತಿರುವ ವೆಚ್ಚ ಕಳವಳಕ್ಕೆ ಕಾರಣವಾಗಿದೆ ಎಂದು ಸಚಿವ ಮುಖರ್ಜಿ ಹೇಳಿದ್ದಾರೆ. |