ಆರ್ಥಿಕ ಹಿಂಜರಿತದಿಂದಾಗಿ ರಫ್ತು ವ್ಯವಹಾರಗಳು ಮತ್ತು ಬಂಡವಾಳ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ನೈಜ ಆರ್ಥಿಕತೆಯನ್ನು ಉತ್ತೇಜಿಸಲು ಭಾರತವು ಜಾಗತಿಕ ಸಹಕಾರವನ್ನು ಬಯಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
"ನಾವೀಗ ಎದುರಿಸುತ್ತಿರುವ ಜಾಗತಿಕ ಆರ್ಥಿಕ ಮತ್ತು ಹಣಕಾಸು ಮಂದಗತಿಯು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತಿದೆ. ಇದು ನಾವು ಮಾಡಿದ ತಪ್ಪಲ್ಲವಾದರೂ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ" ಎಂದು ಜುಲೈ 9ರಂದು ಆರಂಭವಾಗಲಿರುವ ಎರಡು ದಿನಗಳ ಜಿ-8 ಕೈಗಾರಿಕಾ ರಾಷ್ಟ್ರಗಳ ಶೃಂಗಸಭೆಗಾಗಿ ಇಟಲಿಗೆ ತೆರಳುವ ಮುನ್ನ ಮಾತನಾಡುತ್ತಾ ತಿಳಿಸಿದರು.
ಹಿಂಜರಿತದಿಂದಾಗಿ ನಮ್ಮ ರಫ್ತು ವ್ಯವಹಾರಗಳು ಮತ್ತು ಬಂಡವಾಳ ಹರಿವಿನ ಮೇಲೆ ದುಷ್ಪರಿಣಾಮ ಬೀರಿದೆ. ವ್ಯವಸ್ಥೆಯ ವೈಫಲ್ಯಗಳನ್ನು ಸರಿಪಡಿಸಲು ಮತ್ತು ನೈಜ ಆರ್ಥಿಕತೆಯನ್ನು ಉತ್ತೇಜಿಸಲು ನಾವು ಜಾಗತಿಕ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ನಾಲ್ಕು ದಿನಗಳ ಕಾಲ ಇಟಲಿಯಲ್ಲಿ ತಂಗಲಿರುವ ಸಿಂಗ್ ಇದೇ ವೇಳೆ ಬ್ರೆಜಿಲ್, ಚೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯಲಿರುವ 'ಜಿ-5' ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಆಹಾರ ಭದ್ರತೆ, ಶಕ್ತಿಯ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಗಳಂತಹಾ ವಿಚಾರಗಳು ನಿಕಟವಾದ ಸಂಬಂಧ ಹೊಂದಿವೆ. ಹಾಗಾಗಿ ಹವಾಮಾನ ಬದಲಾವಣೆಯ ಕುರಿತು ಚರ್ಚಿಸುವುದು ಕೂಡ ಪ್ರಮುಖ ವಿಚಾರವಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಬ್ರಿಟನ್, ಇಟಲಿ, ಜರ್ಮನಿ, ಜಪಾನ್ ಮತ್ತು ಅಂಗೋಲಾ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.
|