ಯಾವತ್ತೂ ಮಾತಾಡಿದಂತೆ ಇವತ್ತು ಮತ್ತೆ ವಾಚಾಳಿತನ ತೋರಿಸುವುದು ನನ್ನಿಂದ ಅಸಾಧ್ಯ. ಕಳೆದ 28 ವರ್ಷಗಳಿಂದ ನಾನು ಇನ್ಫೋಸಿಸ್ಗೆ ಅಂಟಿಕೊಂಡಿದ್ದೇನೆ. ನನ್ನ ಗುರುತೇ ಇನ್ಫೋಸಿಸ್. ಇದೀಗ ಪ್ರತಿಯೊಬ್ಬ ಭಾರತೀಯನಿಗೂ ಗುರುತಿನ ಚೀಟಿ ನೀಡುವ ಮಹತ್ವದ ಕಾರ್ಯಕ್ರಮವನ್ನು ಮುನ್ನಡೆಸಲು ಹೊರಟು ನಿಂತಿದ್ದೇನೆ. ಆದರೆ ನನ್ನ ಗುರುತನ್ನು ಕಳೆದುಕೊಳ್ಳುತ್ತಿದ್ದೇನೆ-- ಇದು ಇನ್ಫೋಸಿಸ್ನಲ್ಲಿ ಕೊನೆಯ ದಿನ ಕೆಲಸ ಮಾಡಿದ ನಂದನ್ ನಿಲೇಕಣಿ ಭಾವುಕರಾಗಿ ನುಡಿದ ಮಾತುಗಳು.
ಗುರುವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸ್ಟೀಲ್ ಮತ್ತು ಗಾಜುಗಳ ಮಳಿಗೆಯಂತಿರುವ ಎಲೆಕ್ಟ್ರಾನಿಕ್ ಕ್ಯಾಂಪಸ್ನಿಂದ ಇನ್ಫೋಸಿಸ್ನ 20,000 ಉದ್ಯೋಗಿಗಳು ಹೊರಟು ನಿಂತಾಗ ಕಂಪ್ಯೂಟರ್ಗಳೆಲ್ಲ ಸ್ತಬ್ತವಾಗಿದ್ದವು. ಅವರೆಲ್ಲ ಹೊರಟದ್ದು ನಂದನ್ ನಿಲೇಕಣಿಯವರನ್ನು ಬೀಳ್ಕೊಡಲು ಏರ್ಪಡಿಸಲಾಗಿದ್ದ ಸಭಾಂಗಣದ ಸಮಾರಂಭಕ್ಕೆ.
ತಾನು ಬಿಟ್ಟು ಹೋಗುತ್ತಿರುವುದು ಇನ್ಫೋಸಿಸ್ ಕಂಪನಿಯನ್ನಲ್ಲ, ನನ್ನ 'ಕುಟುಂಬ'ವನ್ನೇ ಎಂದು ಉದ್ಯೋಗಿಗಳನ್ನು ಕುರಿತು ಭಾವುಕರಾಗಿಯೇ ಮಾತನಾಡುತ್ತಿದ್ದ ನಿಲೇಕಣಿ ತನ್ನ ಜೀವನಗಾಥೆಯನ್ನೂ ಬಿಚ್ಚಿಟ್ಟರು. "ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿರ ಬೇಕಾದರೆ ಅದೃಷ್ಟವೂ ಬೇಕಾಗುತ್ತದೆ. ಮಾರ್ಗದರ್ಶನಕ್ಕಾಗಿ ಜೀವನದಲ್ಲಿ ನೀವು ಸರಿಯಾದ ವ್ಯಕ್ತಿಯನ್ನೇ ಪಡೆದುಕೊಂಡಿದ್ದೀರಿ" ಎಂದು ಇನ್ಫೋಸಿಸ್ ಮುಖ್ಯ ಮಾರ್ಗದರ್ಶಕ ಎನ್.ಆರ್. ನಾರಾಯಣ ಮೂರ್ತಿಯವರನ್ನು ಉಲ್ಲೇಖಿಸಿದರು.
"ಮೊದಲು ಅವರು ನನಗೆ ಕೆಲಸ ಕೊಟ್ಟರು. ನಂತರ ಅವರು ಇನ್ಫೋಸಿಸ್ ಆರಂಭಿಸಿದಾಗ ಅಲ್ಲಿಗೂ ಆಹ್ವಾನಿಸಿ ಸಹ-ಸಂಸ್ಥಾಪಕನ ಸ್ಥಾನ ಕೊಟ್ಟರು" ಎಂದು ತಾನು ಇನ್ಫೋಸಿಸ್ ಆರಂಭದಲ್ಲಿ ಹೊಂದಿದ್ದ ಕಂಪ್ಯೂಟರ್ ಸ್ಮರಣೆಯನ್ನೂ ಮಾಡಿಕೊಂಡರು.
ಇನ್ಫೋಸಿಸ್ನ ಸಹ-ಸಂಸ್ಥಾಪಕ ಹಾಗೂ ಸಹಾಧ್ಯಕ್ಷರಾಗಿದ್ದ ನಿಲೇಕಣಿ ಮಾತೃ ಸಂಸ್ಥೆಗೆ ರಾಜಿನಾಮೆ ನೀಡಿದ್ದು, ಮುಂದಿನ ವಾರದಿಂದ ದೆಹಲಿಯಲ್ಲಿ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಅಧ್ಯಕ್ಷರಾಗಿ ಕಾರ್ಯಾರಂಭ ಮಾಡಲಿದ್ದಾರೆ.
|