ಅಂಬಾನಿ ಮತ್ತು ವಾಡಿಯಾ ಉದ್ಯಮ ಕುಟುಂಬಗಳ ನಡುವೆ ಮನೆ ಮಾಡಿದ್ದ ಜಿದ್ದಿನ ಮೇಲಾಟವನ್ನು ನಿರಾಕರಿಸಿರುವ ನುಸ್ಲಿ ವಾಡಿಯಾ, ತಾನು ಆ ಕುಟುಂಬದ ಜತೆ ಯಾವುದೇ ಪೈಪೋಟಿಯನ್ನು ನಡೆಸಿರಲಿಲ್ಲ ಎಂದಿದ್ದಾರೆ.
ರಿಲಯೆನ್ಸ್ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಬಾಂಬೆ ಡೈಯಿಂಗ್ ಮಾಲಕ ವಾಡಿಯಾ ಕುಟುಂಬದ ನಡುವಿನ ಪೈಪೋಟಿಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಅವರು, "ಧೀರೂಭಾಯಿ ಅಂಬಾನಿ ಜತೆ ನನಗೆ ಯಾವುದೇ ಪೈಪೋಟಿ ಇರಲಿಲ್ಲ. ಈಗ ಪೈಪೋಟಿಯು ಭಿನ್ನ ಹಂತಗಳಲ್ಲಿ, ಭಿನ್ನ ವ್ಯಕ್ತಿಗಳ ಜತೆ, ಬೇರೆ ಬೇರೆ ವಿಚಾರಗಳಿಗಷ್ಟೇ ಇರುತ್ತದೆ ಎಂದಷ್ಟೇ ನಾನು ಹೇಳಬಲ್ಲೆ.." ಎಂದು ಖಾಸಗಿ ವಾರ್ತಾವಾಹಿನಿಯೊಂದಕ್ಕೆ ತಿಳಿಸಿದರು.
ಇಟಿ ನೌ ಚಾನೆಲ್ನೊಂದಿಗೆ ಮಾತನಾಡುತ್ತಿದ್ದ ಅವರಲ್ಲಿ ಮತ್ತೊಬ್ಬ ಖ್ಯಾತ ಉದ್ಯಮಿ ರತನ್ ಟಾಟಾ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, "ಟಾಟಾ ನನ್ನ ಆತ್ಮೀಯ ಸ್ನೇಹಿತ. ನನ್ನ ಕುಟುಂಬಕ್ಕೂ ಅವರು ಆಪ್ತರು" ಎಂದರು.
ಪಶ್ಚಿಮ ಬಂಗಾಲದಲ್ಲಿನ ನ್ಯಾನೋ ಯೋಜನೆಯು ವಿಫಲವಾದ ಸಿಂಗೂರು ಘಟನೆ ಬಗ್ಗೆ ಮಾತಿಗಿಳಿದ ಅವರು, "ಅದು ನಿಜಕ್ಕೂ ದುರದೃಷ್ಟಕರ. ಈ ವಿಚಾರದಲ್ಲಿ ನಾನು ವಿವಾದ ಮಾಡಲು ಇಚ್ಛಿಸುವುದಿಲ್ಲ. ಮತ್ತೆ ಸಿಂಗೂರು ವಿಚಾರದ ಪ್ರತಿಕ್ರಿಯೆಗಳು ಬೇಕಿಲ್ಲ" ಎಂದರು.
ಆದರೆ ಟಾಟಾ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, "ಸಿಂಗೂರು ಘಟನೆ ಮುಗಿದು ಹೋಗಿದೆ. ಟಾಟಾ ಮೋಟಾರ್ಸ್ ಈಗ ಗುಜರಾತ್ನಲ್ಲಿ ತಮ್ಮ ನೆಲೆಯನ್ನು ಕಂಡು ಕೊಂಡಿದ್ದಾರೆ. ಜತೆಗೆ ನ್ಯಾನೋ ಕೂಡ ಈಗ ಹೊರಗೆ ಬಂದಿದೆ. ಹಾಗಾಗಿ ಮುಗಿದು ಹೋದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಡೆದದ್ದು ನಿಜಕ್ಕೂ ದುರದೃಷ್ಟಕರ, ಹಾಗಾಗಬಾರದಿತ್ತು.." ಎಂದು ವಿವರಿಸಿದ್ದಾರೆ.
|