ಕಾವೇರಿ ಗೋದಾವರಿ ನೈಸರ್ಗಿಕ ಅನಿಲವು ಸರಕಾರಕ್ಕೆ ಸೇರಿದ್ದೇ ಹೊರತು ಅನಿಲ್ ಅಂಬಾನಿ ಸಹೋದರರಿಗಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಭಾನುವಾರ ಪುನರುಚ್ಛರಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಇಂಧನ ಸಚಿವರು, ಕಾವೇರಿ ಗೋದಾವರಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು.
"ಸರಕಾರವು ಅದರಲ್ಲಿ ಸಾಕಷ್ಟು ಹಕ್ಕನ್ನು ಹೊಂದಿದೆ. ನೈಸರ್ಗಿಕ ಅನಿಲವು ಮುಖೇಶ್ ಅಥವಾ ಅನಿಲ್ ಅಂಬಾನಿಯವರಿಗೆ ಸೇರಿದುದಲ್ಲ. ಗ್ಯಾಸ್ ಸರಕಾರಕ್ಕೆ ಸೇರಿದ್ದು" ಎಂದು ಅವರು ತಿಳಿಸಿದ್ದಾರೆ.
ಅನಿಲ್ ಅಂಬಾನಿಯವರ ಆರ್ಎನ್ಆರ್ಎಲ್ ಕಂಪನಿಗೆ ಎಂಎಂಬಿಟಿಯು ಒಂದಕ್ಕೆ 2.34 ಅಮೆರಿಕನ್ ಡಾಲರ್ನಂತೆ ಅನಿಲ ಪೂರೈಕೆ ಮಾಡಲು ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮುಖೇಶ್ ಅಂಬಾನಿಯವರ ಆರ್ಐಎಲ್ ಸುಪ್ರೀಂ ಕೋರ್ಟ್ ಮೊರೆ ಹೋದ ಬೆನ್ನಿಗೆ ಅನಿಲ್ ಕೂಡ ಸುಪ್ರೀಂ ಮೆಟ್ಟಿಲು ಹತ್ತಿದ್ದಾರೆ. ಪ್ರಕರಣದ ವಿಚಾರಣೆ ಜುಲೈ 20ರಂದು ನಡೆಯಲಿದೆ.
|